ಮಂಗಳೂರು: ಹಿರಿಯ ಕವಿ–ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರ ತುಳು ಭಾಷೆಯ ಹತ್ತು ಆಯ್ದ ಸಣ್ಣಕಥೆಗಳನ್ನು ಹೈದರಾಬಾದ್ನ ರಂಗನಾಥ ರಾವ್ ಅವರು ತೆಲುಗಿಗೆ ಅನುವಾದಿಸಿರುವ ‘ನಾಕೂರು’ ಕೃತಿಯನ್ನು ನಗರದ ಪತ್ರಿಕಾಭವನದಲ್ಲಿ ಇಂದು ಬಿಡುಗಡೆಗೊಳಿಸಲಾಯಿತು.
ತುಳುನಾಡಿನ ಬದುಕು, ಸಂಸ್ಕೃತಿ, ಜಾನಪದ ಹಾಗೂ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಪ್ರತಿಬಿಂಬಿಸುವ ಈ ಕಥೆಗಳು ಮೊದಲ ಬಾರಿಗೆ ತುಳುವಿನಿಂದ ತೆಲುಗಿಗೆ ಅನುವಾದಗೊಂಡು ಪುಸ್ತಕ ರೂಪದಲ್ಲಿ ಪ್ರಕಟವಾಗಿದ್ದು, ತೆಲುಗು ಓದುಗರಿಗೆ ತುಳುನಾಡಿನ ಜೀವನಶೈಲಿ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಮಹತ್ವದ ಕೃತಿಯಾಗಿದೆ.

ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ ಡಾ. ಜಿ.ಆರ್. ಕೃಷ್ಣ ಕೃತಿಯನ್ನು ಪರಿಚಯಿಸಿ ವಿಮರ್ಶಾತ್ಮಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕೃತಿಯನ್ನು ಬಿಡುಗಡೆಗೊಳಿಸಿದರು. ಮೂಲ ಕಥೆಗಾರ ಡಾ. ವಸಂತಕುಮಾರ ಪೆರ್ಲ ತಮ್ಮ ಕಥೆಗಳ ಹಿನ್ನೆಲೆ, ತುಳು ಸಾಹಿತ್ಯದ ವೈಶಿಷ್ಟ್ಯ ಹಾಗೂ ಅನುವಾದದ ಮಹತ್ವದ ಕುರಿತು ಮಾತನಾಡಿದರು.
ಮಂಗಳೂರಿನ ‘ಭೂಮಿಗೀತ’ ಸಾಹಿತ್ಯ–ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸದಾನಂದ ನಾರಾವಿ ಸ್ವಾಗತಿಸಿದರು. ಶೈಲಾಕುಮಾರಿ ಕೆ. ವಂದನಾರ್ಪಣೆ ಮಾಡಿದರು.


