ಮಂಗಳೂರಲ್ಲಿ ಬಾಂಗ್ಲಾದೇಶದ ಪ್ರಜೆಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರು ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ಹಾಕುತ್ತಾರೆ. ಇದ್ರಲ್ಲಿ ಅವರು ಮಂಗಳೂರಲ್ಲಿ ಬಾಂಗ್ಲಾದೇಶಿಗಳು ಇದ್ದಾರೆ, ಎಚ್ಚೆತ್ತುಕೊಳ್ಳಬೇಕೆಂದು ಹೇಳಿದ್ದರು. ಆದ್ರೆ ವಾಸ್ತವವಾಗಿ ಮಂಗಳೂರಲ್ಲಿ ಬಾಂಗ್ಲಾದೇಶದಿಂದ ನುಸುಳುಕೋರರು ಯಾವುದೇ ದಾರಿ ಇಲ್ಲ. ಪಶ್ಚಿಮ ಬಂಗಾಳದ ಮೂಲಕ ಬರಬೇಕು. ಅಲ್ಲಿ ಗಡಿ ಕಾಯುವವರು ಕರ್ನಾಟಕದವರಲ್ಲ. ಬದಲಾಗಿ ಕೇಂದ್ರ ಸರ್ಕಾರದಿಂದ ನಿಯೋಜಿಗೊಂಡ ಭದ್ರತಾ ಕಡೆಯವರು ಎಂದು ಎಸ್ ಡಿಪಿಐ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶ್ರಫ್ ಅಡ್ಡೂರ್ ಹೇಳಿದ್ದಾರೆ.

ಅವರು ಮಂಗಳೂರಿನ ಜಿಲ್ಲಾ ಕಚೇರಿಯಲ್ಲಿ ಮಾತನಾಡುತ್ತಾ, ಬಾಂಗ್ಲಾದಿಂದ ನುಸುಳುಕೋರರು ಬಂದಿರುವುದು ಕೇಂದ್ರ ಸರ್ಕಾರದ ವೈಫಲ್ಯ. ನುಸುಳುಕೋರರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುವ ಕ್ರಮ ಸ್ವಾಗತಾರ್ಹ ಎಂದ ಅವರು, ವಾಸ್ತವ ಸ್ಥಿತಿಯನ್ನು ಬದಿಗಿಟ್ಟು ಬಿಜೆಪಿ ಶಾಸಕರು ಮಂಗಳೂರಿನ ಶಾಂತಿಯನ್ನು ಕೆಡವಲು ಪ್ರಯತ್ನಿಸಿರುವುದು ಖಂಡನೀಯ ಅಂದರು. ಶಾಸಕರ ಈ ನಡೆಯನ್ನು ಎಲ್ಲರೂ ಖಂಡಿಸಬೇಕು. ಅವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡಲು ಸಮಯ ಇಲ್ಲ. ಮಂಗಳೂರಲ್ಲಿ ಅನೇಕ ಸಮಸ್ಯೆಗಳಿದ್ದು ಬಿಜೆಪಿ ಶಾಸಕರಿಗೆ ತೈಲ ಬೆಲೆ ಹೆಚ್ಚಳ, ಆಹಾರದ ಬೆಲೆ ಹೆಚ್ಚಳದ ಕುರಿತು ಮಾತನಾಡಲು ಸಮಯ ಇಲ್ಲ ಎಂದು ಕಿಡಿಕಾರಿದ್ದಾರೆ.


