ಮೂಡ ಮಾಸ್ಟರ್ ಪ್ಲಾನ್‌ಗೆ ಮೊದಲ ಆದ್ಯತೆ: ಸಂತೋಷ್ ಕುಮಾರ್ ಶೆಟ್ಟಿ

ಮಂಗಳೂರು: ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಮೂಡ) ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಸಂತೋಷ್ ಕುಮಾರ್ ಶೆಟ್ಟಿ, ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಮೂಡ ಮಾಸ್ಟರ್ ಪ್ಲಾನ್‌ಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

ಮೂಡ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಸ್ಟರ್ ಪ್ಲಾನ್‌ಗೆ ಸಂಬಂಧಿಸಿದ ಸಣ್ಣಪುಟ್ಟ ತೊಡಕುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಶೀಘ್ರವೇ ಅಂತಿಮಗೊಳಿಸುವ ಪ್ರಯತ್ನ ನಡೆಸಲಾಗುವುದು ಎಂದರು.

ಮೂಡವು ಕೇವಲ ನಿವೇಶನ ಹಂಚಿಕೆಗೆ ಸೀಮಿತವಾಗದೆ, ಮಂಗಳೂರಿನ ಸಮಗ್ರ ಅಭಿವೃದ್ಧಿ ಹಾಗೂ ಮೂಲಸೌಕರ್ಯ ವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಬೇಕು ಎಂಬುದು ತಮ್ಮ ಉದ್ದೇಶ ಎಂದು ತಿಳಿಸಿದರು.

ನಗರದ ವಿಸ್ತರಣೆ, ಸುರತ್ಕಲ್ ಹಾಗೂ ಬಿ.ಸಿ.ರೋಡ್ ಭಾಗಗಳ ಅಭಿವೃದ್ಧಿ, ರಸ್ತೆ ಮತ್ತು ಮೂಲಸೌಕರ್ಯ ಸುಧಾರಣೆಗೆ ಆದ್ಯತೆ ನೀಡಲಾಗುವುದು ಎಂದ ಅವರು, ಮಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಫ್ಲೈಓವರ್, ಅಂಡರ್‌ಪಾಸ್ ಸೇರಿದಂತೆ ಅಗತ್ಯ ಯೋಜನೆಗಳನ್ನು ರೂಪಿಸಲು ಪ್ರಯತ್ನಿಸಲಾಗುವುದು ಎಂದರು.

ಇದರ ಜೊತೆಗೆ ಕೆರೆಗಳ ಅಭಿವೃದ್ಧಿ ಹಾಗೂ ನಗರದಲ್ಲಿ ಪಾರ್ಕ್‌ಗಳ ನಿರ್ಮಾಣಕ್ಕೂ ಒತ್ತು ನೀಡಲಾಗುವುದು. ಅಗತ್ಯವಿದ್ದಲ್ಲಿ ಖಾಸಗಿ ಜಾಗಗಳನ್ನು ಪಡೆದು ಸಣ್ಣ ಪ್ರಮಾಣದ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆಯೂ ಇದೆ ಎಂದು ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದರು.

SHARE
Loading spinner

One thought on “ಮೂಡ ಮಾಸ್ಟರ್ ಪ್ಲಾನ್‌ಗೆ ಮೊದಲ ಆದ್ಯತೆ: ಸಂತೋಷ್ ಕುಮಾರ್ ಶೆಟ್ಟಿ

Leave a Reply

Your email address will not be published. Required fields are marked *

error: Content is protected !!