‘ಮೀಡಿಯಾ ಮನಸುಗಳು’ ಪ್ರೇರಣೆಗೆ ದೇರೆಬೈಲ್ ಬಸ್‌ ತಂಗುದಾಣ ಭಾಗಶಃ ಸ್ವಚ್ಛ!

ಮಂಗಳೂರು: ಸ್ವಚ್ಛತೆ ಎಂಬುದು ಕೇವಲ ಹೇಳಿಕೆಯಲ್ಲಿ ಉಳಿಯುವ ಕಲ್ಪನೆಯಲ್ಲ. ಮನಸ್ಸಿದ್ದರೆ ಕೈಜೋಡಿಸಿ ಮಾಡಬಹುದಾದ ಸಕ್ರಿಯ ಆಂದೋಲನ ಎಂಬುದಕ್ಕೆ ದೇರೆಬೈಲ್ ಚರ್ಚ್ ಬಳಿಯ ಬಸ್‌ ತಂಗುದಾಣ ಸಾಕ್ಷಿಯಾಗಿದೆ.ಇತ್ತೀಚಿನವರೆಗೂ ಕಸ-ಕಡ್ಡಿಗಳಿಂದ ತುಂಬಿ, ದುರ್ನಾತ ಹಾಗೂ ಅಶುಚಿತ್ವದಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ನಿಲ್ಲಬೇಕಾದ ಸ್ಥಿತಿಯಲ್ಲಿದ್ದ ಈ ತಂಗುದಾಣದಲ್ಲಿ ಇದೀಗ ಬದಲಾವಣೆಯ ಸಣ್ಣ ಹೆಜ್ಜೆಯೊಂದು ಮೂಡಿದೆ.


ದಿನನಿತ್ಯ ನೂರಾರು ಮಂದಿ ಬಸ್ ಕಾಯುವ ಈ ನಿಲ್ದಾಣದ ದುಸ್ಥಿತಿಯು ‘ಮೀಡಿಯಾ ಮನಸುಗಳು’ ತಂಡದ ಗಮನ ಸೆಳೆದಿತ್ತು. ಅಲ್ಲಿನ ವಾಸ್ತವ ಸ್ಥಿತಿಯನ್ನು ವಿಡಿಯೋ ಮೂಲಕ ಜನರ ಮುಂದಿಟ್ಟ ತಂಡ, ಶೀಘ್ರದಲ್ಲೇ ಸ್ವಚ್ಛತಾ ಕಾರ್ಯ ಕೈಗೊಳ್ಳುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿತ್ತು. ಒಂದು ವಿಡಿಯೋ ಕೇವಲ ದೃಶ್ಯವನ್ನಷ್ಟೇ ತೋರಿಸಲಿಲ್ಲ ಬದಲಿಗೆ ಅದು ಜವಾಬ್ದಾರಿಯ ಪ್ರಶ್ನೆಯನ್ನೂ ಸಮಾಜದ ಮುಂದಿಟ್ಟಿತ್ತು.
ಆದರೆ, ತಂಡ ಸ್ವತಃ ಕಾರ್ಯಾಚರಣೆಗೆ ಇಳಿಯುವ ಮುನ್ನವೇ ಅಲ್ಲೊಂದು ಮೌನ ಕ್ರಾಂತಿ ನಡೆದಿದೆ.


‘ಮೀಡಿಯಾ ಮನಸುಗಳು’ ತಂಡದ ವಿಡಿಯೋದಿಂದ ಪ್ರೇರಣೆ ಪಡೆದವರು ಬಸ್‌ ನಿಲ್ದಾಣದ ಭಾಗಶ: ಕಸ ತ್ಯಾಜ್ಯವನ್ನು ತೆರವುಗೊಳಿಸಿದ್ದಾರೆ. ಈ ಪುಟ್ಟ ಕಾರ್ಯವು ದೊಡ್ಡ ಸಾಮಾಜಿಕ ಸಂದೇಶವೊಂದನ್ನು ಸಾರಿದೆ. ಈ ಕಾರ್ಯ ನಿಜಕ್ಕೂ ಅಭಿನಂದನಾರ್ಹವಾಗಿದೆ.
ಇದು ‘ಮೀಡಿಯಾ ಮನಸುಗಳು’ ತಂಡದ ಸಾಮಾಜಿಕ ಕಳಕಳಿಗೆ ದೊರೆತ ಮೊದಲ ಪ್ರತಿಫಲವೂ ಹೌದು. ಒಂದು ಸಮಸ್ಯೆಯನ್ನು ಎತ್ತಿ ತೋರಿಸಿದಾಗ, ಅದಕ್ಕೆ ಸಮಾಜದಿಂದಲೇ ಪ್ರತಿಕ್ರಿಯೆ ಮೂಡಬಹುದು ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ.

ಆದರೆ, ಅರ್ಧ ಸ್ವಚ್ಛತೆಯಲ್ಲಿ ಪೂರ್ಣ ಪರಿಹಾರವಿಲ್ಲ. ಜನರು ಆರಂಭಿಸಿದ ಈ ಕಾರ್ಯಕ್ಕೆ ಇದೀಗ ಮಹಾನಗರ ಪಾಲಿಕೆ ಕೈಜೋಡಿಸಬೇಕಿದೆ. ಉಳಿದಿರುವ ಕಸ-ಕಡ್ಡಿಗಳನ್ನು ಸಂಪೂರ್ಣ ತೆರವುಗೊಳಿಸಿ, ತಂಗುದಾಣವನ್ನು ಸ್ವಚ್ಛ ಹಾಗೂ ಪ್ರಯಾಣಿಕ ಸ್ನೇಹಿಯಾಗಿಸುವುದರ ಜೊತೆಗೆ, ಮುಂದೆಯೂ ಅಲ್ಲಿ ಕಸ ಸಂಗ್ರಹವಾಗದಂತೆ ನಿಯಮಿತ ಸ್ವಚ್ಛತಾ ವ್ಯವಸ್ಥೆ ರೂಪಿಸಬೇಕಿದೆ.
ಏಕೆಂದರೆ ಸ್ವಚ್ಛ ಬಸ್‌ ತಂಗುದಾಣ ಎನ್ನುವುದು ಕೇವಲ ಒಂದು ಸ್ಥಳದ ಸೌಂದರ್ಯವಲ್ಲ, ಅದು ಆ ಸಮಾಜದ ನಾಗರಿಕ ಪ್ರಜ್ಞೆಯ ಪ್ರತಿಬಿಂಬವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!