ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ’ಧರ್ಮಸ್ಥಳ’ ಕ್ಷೇತ್ರವನ್ನು ಟಾರ್ಗೆಟ್ ಮಾಡಿರುವ ಆಘಾತಕಾರಿ ಸಂಗತಿ

ಮಂಗಳೂರು ಹೊರ ವಲಯದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಬ್ಲಾಸ್ಟ್ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣಾ ಮಾಹಿತಿ ಆರೋಪಿಯು, ಧರ್ಮಸ್ಥಳದಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದ ಎನ್ನುವುದನ್ನು ಬೆಳಕಿಗೆ ತಂದಿದೆ.
ನವೆಂಬರ್ 2022ರಲ್ಲಿ ನಡೆದ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ನಡೆಸುತ್ತಿದೆ.

ಮಂಗಳೂರಿನಲ್ಲಿ ಹಿಂದೆ ಆಟೋರಿಕ್ಷಾದಲ್ಲಿ ಕಡಿಮೆ ತೀವ್ರತೆಯ ಸ್ಪೋಟ ಸಂಭವಿಸಿತ್ತು.

ಜಾರಿ ನಿರ್ದೇಶನಾಲಯವು, ಪ್ರಮುಖ ಆರೋಪಿ ಸಯ್ಯದ್ ಯಾಸಿನ್ ಬ್ಯಾಂಕ್ ಖಾತೆಯಲ್ಲಿದ್ದ 29 ಸಾವಿರ ರೂಪಾಯಿ ಹಣವನ್ನು, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ. ಐಸಿಸ್ ಆನ್ಲೈನ್ ಹ್ಯಾಂಡ್ಲರ್ ಕರ್ನಲ್ ಕಳುಹಿಸುತ್ತಿದ್ದ ಹಣವನ್ನು ಆರೋಪಿ ಮೊಹಮ್ಮದ್ ಶಾರೀಕ್ ಸ್ವೀಕರಿಸಲು, ಮತ್ತೊಬ್ಬ ಆರೋಪಿ ಮುನೀರ್, ಅನಧಿಕೃತ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ನೀಡುತ್ತಿದ್ದ ಎನ್ನುವ ವಿಚಾರವೂ, ಬಹಿರಂಗಗೊಂಡಿದೆ.

ಜಾರಿ ನಿರ್ದೇಶನಾಲಯದ ವಿಚಾರಣೆಯ ವೇಳೆ ಹೊರಬಿದ್ದ ಅಂಶವೆಂದರೆ ಆರೋಪಿಗಳ ನಿಜವಾದ ಟಾರ್ಗೆಟ್ ಧರ್ಮಸ್ಥಳವಾಗಿತ್ತು. ದೇವಾಲಯದ ಒಳಗೆ ಬಾಂಬ್ ಸ್ಪೋಟಿಸಲು ಆರೋಪಿಗಳು ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ, ತಮ್ಮದೇ ತಪ್ಪಿನಿಂದ ಅದು ಉಲ್ಟಾ ಹೊಡೆಯಿತು.

ಬಾಂಬ್ ಟೈಮರ್ ಅನ್ನು 90 ನಿಮಿಷ ಎಂದು ಸೆಟ್ ಮಾಡುವ ಬದಲು 9 ಸೆಕೆಂಡಿಗೆ ಸೆಟ್ ಮಾಡಲಾಗಿತ್ತು. ಹಾಗಾಗಿ, ಇದು ದಾರಿ ಮಧ್ಯದಲ್ಲಿಯೇ ಸ್ಪೋಟಗೊಂಡಿತು. ಇದು, ಆಟೋರಿಕ್ಷಾದೊಳಗೆ ಸ್ಪೋಟಗೊಂಡಿತ್ತು. ಇವರ ಪ್ಲ್ಯಾನ್ ಸರಿಯಾದ ದಾರಿಯಲ್ಲಿ ಸಾಗಿದ್ದರೆ, ಸದಾ ಭಕ್ತರ ದಟ್ಟಣಿ ಇರುವ ಧರ್ಮಸ್ಥಳ ದೇವಾಲಯದಲ್ಲಿ ಸಾಕಷ್ಟು ತೊಂದರೆಯಾಗುತ್ತಿತ್ತು.

ಈ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಶಂಕಿತ ಉಗ್ರರ ವಿಚಾರಣೆಯ ವೇಳೆ, ಧರ್ಮಸ್ಥಳ ದೇವಾಲಯದಲ್ಲಿ ಇಡಲೆಂದೇ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಕೊಂಡೊಯ್ಯಲಾಗುತ್ತಿತ್ತು. ಬಾಂಬ್ ಗೆ ಟೈಮರ್ ಇಡುವುದರಲ್ಲಿ ತಪ್ಪು ಮಾಡಿರುವ ಹಿನ್ನಲೆಯಲ್ಲಿ ಆಟೋದಲ್ಲೇ ಸ್ಪೋಟಗೊಂಡಿದೆ.

ಮಂಗಳೂರು ಕಂಕನಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನವೆಂಬರ್ 19, 2022ರ ಸಂಜೆ 4.40ಕ್ಕೆ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಸ್ಪೋಟ ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆಟೋ ಚಾಲಕರಾಗಿದ್ದ ಪುರುಷೋತ್ತಮ್ ಎನ್ನುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.

ಸ್ಪೋಟದ ಹಿಂದೆ ಉಗ್ರ ಸಂಘಟನೆಗಳ ಕೈವಾಡ ಇರಬಹುದು ಎನ್ನುವ ಕಾರಣಕ್ಕಾಗಿ ಪ್ರಕರಣವನ್ನು ಎನ್ಐಎಗೆ ವಹಿಸಲಾಗಿತ್ತು. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯ ಶಂಕೆ ಇದ್ದ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯ ಕೂಡಾ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.

ಕೇಸಿನ ಪ್ರಮುಖ ಆರೋಪಿಗಳಾದ ಸಯ್ಯದ್ ಯಾಸಿನ್ ಮತ್ತು ಮೊಹಮ್ಮದ್ ಶಾರೀಕ್, ಪಾಯಿಂಟ್ ಆಫ್ ಸೇಲ್ ಏಜೆಂಟುಗಳಿಗೆ ಕಮಿಷನ್ ನೀಡಿ ನಗದನ್ನು ಪಡೆಯುತ್ತಿದ್ದರು. ಈ ರೀತಿ, ಆರೋಪಿಗಳಿಗೆ ಇದುವರೆಗೆ 2.86 ಲಕ್ಷ ಹಣ ರವಾನೆಯಾಗಿತ್ತು. ಈ ಹಣವನ್ನು ಬಾಂಬ್ ತಯಾರಿಸಲು ಬಳಸಲಾಗಿತ್ತು.

ಆನ್ಲೈನ್ ನಲ್ಲಿ ವಸ್ತುಗಳ ಖರೀದಿ, ಮೈಸೂರು ನಗರ ಮತ್ತು ಇತರ ಕಡೆ ಮನೆ ಬಾಡಿಗೆ ಪಡೆಯಲೂ ಬಳಸಲಾಗಿತ್ತು. ಕೇರಳ ಮತ್ತು ತಮಿಳುನಾಡಿನ ಹಲವು ಕಡೆ ಬಾಂಬ್ ಸ್ಪೋಟಿಸುವ ಸಂಬಂಧ ಸಮೀಕ್ಷೆ ಕೂಡಾ ಇವರು ನಡೆಸುತ್ತಿದ್ದರು ಎಂದು ವರದಿಯಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!