ಮಂಗಳೂರು: ಮುಂಬೈ ನಗರದ ಮೇಲೆ 2008ರ ನ.26ರಂದು ನಡೆದ ಭಯೋತ್ಪಾದನಾ ದಾಳಿಯ ಸಂದರ್ಭ ಉಗ್ರರ ವಿರುದ್ಧ ವೀರಾವೇಶದಿಂದ ಹೋರಾಡಿ ನಾಗರಿಕರನ್ನು ರಕ್ಷಿಸಿದ ವೀರ ಯೋಧರನ್ನು ಸ್ಮರಿಸಿ ನುಡಿನಮನ ಸಲ್ಲಿಸುವ ಸಲುವಾಗಿ ಮಂಗಳೂರಿನ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ವತಿಯಿಂದ ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮ ನ.26ರಂದು ಸಂಜೆ 4ಕ್ಕೆ ಕದ್ರಿ ಯುದ್ಧ ಸ್ಮಾರಕದಲ್ಲಿ ನಡೆಯಲಿದೆ ಎಂದು ವೇದಿಕೆಯ ಸ್ಥಾಪಕ ಫ್ರ್ಯಾಂಕ್ಲಿನ್ ಮೊಂತೆರೋ ತಿಳಿಸಿದರು.
ಅವರು ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಸೈಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ.ಫಾ.ಮೆಲ್ವಿನ್ ಜೋಸೆಫ್ ಪಿಂಟೊ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಲಿದ್ದು, ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ದೀಪ ಪ್ರಜ್ವಲನಗೊಳಿಸಲಿದ್ದಾರೆ. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಝಬುನ್ನೀಸಾ ಸಂವಿಧಾನ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ನಿವೃತ್ತ ಶಿಕ್ಷಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ನುಡಿನಮನ ಸಲ್ಲಿಸಲಿದ್ದಾರೆ.
ಇದೇ ವೇಳೆ ನಡೆಯಲಿರುವ ಸ್ಟೇಟಿಂಗ್ ರ್ಯಾಲಿಗೆ ಶಾಸಕ ವೇದವ್ಯಾಸ ಕಾಮತ್ ಚಾಲನೆ ನೀಡಲಿದ್ದಾರೆ. ಬಳಿಕ ಭರತನಾಟ್ಯದಲ್ಲಿ ವಿಶ್ವ ದಾಖಲೆಗೈದ ಕಲಾವಿದೆ ರೆಮೋನಾ ಇವೆಟ್ ಪಿರೇರರಿಂದ ಕದ್ರಿ ಉದ್ಯಾನವನದಲ್ಲಿ ನೃತ್ಯ ನಮನ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಿಚಡ್ ರೆಸ್ಕಿನಾ ಬಿಜೈ, ಅರುಣ್ ಪಿಂಟೊ, ಪ್ರೀತಿ ಮಿನೇಜಸ್ ಕುಲಶೇಖರ, ಲ್ಯಾನಿ ಪಿಂಟೋ ಉಪಸ್ಥಿತರಿದ್ದರು.