​ಸೌಹಾರ್ದತೆಯ ಸಂಭ್ರಮ: ಉದ್ಯಾವರ ಜಮಾ ಹತ್ ಗೆ ಉದ್ಯಾವರ ಶ್ರೀ ಅರಸು ದೈವಗಳ ಭೇಟಿ; ಜಾತ್ರೆಗೆ ಮುಸ್ಲಿಂ ಬಾಂಧವರಿಗೆ ಪ್ರೀತಿಯ ಆಮಂತ್ರಣ

ಮಂಜೇಶ್ವರದಲ್ಲಿ ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಪ್ರತಿರೂಪವಾಗಿರುವ ಉದ್ಯಾವರ ಅರಸು ಮಂಜೀಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ವಿಧಿವಿಧಾನಗಳು ಭಕ್ತಿ ಹಾಗೂ ಸೌಹಾರ್ದತೆಯೊಂದಿಗೆ ನೆರವೇರಿದವು. ಹಿಂದೂ–ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿರುವ ಈ ಅಪೂರ್ವ ಸಂಪ್ರದಾಯವು ಮತ್ತೆ ಗಮನ ಸೆಳೆದಿದೆ.

ಪ್ರಾಚೀನ ಕಾಲದಿಂದ ನಡೆದುಕೊಂಡು ಬರುತ್ತಿರುವ ಪದ್ಧತಿಯಂತೆ, ಕ್ಷೇತ್ರದ ಅರಸು ದೈವಗಳ ಪಾತ್ರಿಗಳು ಶುಕ್ರವಾರ ಮಧ್ಯಾಹ್ನ ಉದ್ಯಾವರ ಸಾವಿರ ಜಮಾತ್ ಮಸೀದಿಗೆ ಭೇಟಿ ನೀಡಿ ಮುಸ್ಲಿಂ ಬಾಂಧವರನ್ನು ಜಾತ್ರೆಗೆ ಆತ್ಮೀಯವಾಗಿ ಆಹ್ವಾನಿಸಿದರು. ಮೇಷ ಸಂಕ್ರಮಣದ ನಂತರದ ಮೊದಲ ಶುಕ್ರವಾರದಂದು ಈ ಭೇಟಿ ನೀಡುವುದು ಶತಮಾನಗಳ ಹಳೆಯ ಪರಂಪರೆಯಾಗಿದೆ.

ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವ ಪಾತ್ರಿಗಳನ್ನು ಮಸೀದಿ ಆಡಳಿತ ಸಮಿತಿ, ಶಾಸಕರು ಹಾಗೂ ನೂರಾರು ಮುಸ್ಲಿಂ ಬಾಂಧವರು ಭವ್ಯವಾಗಿ ಸ್ವಾಗತಿಸಿದರು. ಈ ದೃಶ್ಯವು ನಾಡಿನ ಕೋಮು ಸೌಹಾರ್ದತೆಗೆ ಪ್ರತೀಕವಾಗಿ ಕಾಣಿಸಿತು.

ಜಾತ್ರೆಯ ನೇಮೋತ್ಸವದ ದಿನ ಮಸೀದಿ ಪದಾಧಿಕಾರಿಗಳಿಗೆ ದೈವಸ್ಥಾನದಲ್ಲಿ ವಿಶೇಷ ಆಸನ ಮೀಸಲಿಟ್ಟು ಗೌರವಿಸುವುದು ಹಾಗೂ ದೈವಗಳಿಂದ ನೀಡುವ ಪ್ರಸಾದವನ್ನು ಜಮಾತ್ ಸದಸ್ಯರಿಗೆ ಹಂಚುವ ಮೂಲಕ ಈ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಾಗುತ್ತದೆ.

ಮೇ 9ರಂದು ಧ್ವಜಾರೋಹಣದೊಂದಿಗೆ ಜಾತ್ರೆಗೆ ಚಾಲನೆ ದೊರಕಲಿದ್ದು, ಮೇ 11 ಮತ್ತು 12ರಂದು ಐತಿಹಾಸಿಕ ವಾರ್ಷಿಕ ಬಂಡಿ ಉತ್ಸವ ನಡೆಯಲಿದೆ.

ಈ ಸಂದರ್ಭದಲ್ಲಿ ಕಿರಣ್ ಶೆಟ್ಟಿ, ಸಂಜೀವ ಶೆಟ್ಟಿ, ಉಮೇಶ್ ಪೂಮಣ್ಣು, ತಿಮ್ಮ ಭಂಡಾರಿ, ಕುಂಞಣ್ಣ ಚೌಟ, ಮಂಜ ರೈ ಸೇರಿದಂತೆ ಕ್ಷೇತ್ರದ ಪದಾಧಿಕಾರಿಗಳು ಹಾಗೂ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು. ಧರ್ಮದ ಗಡಿಗಳನ್ನು ಮೀರಿ ನಡೆಯುವ ಈ ಜಾತ್ರೆ ಸಮಾಜಕ್ಕೆ ಪ್ರೀತಿ, ಸಾಮರಸ್ಯ ಮತ್ತು ಸಹಬಾಳ್ವೆಯ ಮಹತ್ವವನ್ನು ಸಾರುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!