ಮಂಜೇಶ್ವರ: ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಕುಖ್ಯಾತ ಆರೋಪಿಯನ್ನು ಕುಂಬಳೆ ಪೊಲೀಸರು ಚಾಣಾಕ್ಷತನದಿಂದ ಬಂಧಿಸಿದ್ದಾರೆ.ಆರಿಕ್ಕಾಡಿ ಬನ್ನಂಗುಳ ನಿವಾಸಿ ಅಬ್ದುಲ್ ಜಲೀಲ್ ಅಲಿಯಾಸ್ ಜಲ್ಲು (28) ಬಂಧಿತ ಆರೋಪಿ.
ಬದಿಯಡ್ಕ ಮತ್ತು ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಸೇರಿದಂತೆ ಹಲವಾರು ಗಂಭೀರ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ. ಕಳೆದ ಕೆಲವು ಸಮಯದಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕಣ್ಣೂರು ಜಿಲ್ಲೆಯ ವಳಪಟ್ಟಣಂ ಎಂಬಲ್ಲಿ ಗುಟ್ಟಾಗಿ ನೆಲೆಸಿದ್ದ ಈತನ ಬಗ್ಗೆ ಕುಂಬಳೆ ಎಸ್. ಐ. ಅನಂತಕೃಷ್ಣ ಆರ್. ಮೆನೋನ್ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರ ತಂಡ ವಳಪಟ್ಟಣಂಗೆ ತೆರಳಿ ಆರೋಪಿಯನ್ನು ಸುತ್ತುವರೆದು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಆರೋಪಿಯನ್ನು ಸದ್ಯ ಕಸ್ಟಡಿಗೆ ಪಡೆಯಲಾಗಿದೆ. ಈ ಬಂಧನದ ಮೂಲಕ ಹಲವು ದಿನಗಳ ಪತ್ತೆ ಕಾರ್ಯಕ್ಕೆ ಅಂತ್ಯ ಹಾಡಲಾಗಿದೆ.