ಮಂಜೇಶ್ವರ: ಅಪಾಯದ ಸ್ಥಿತಿಯಲ್ಲಿರುವ ಉದ್ಯಾವರ ತೊಟ್ಟ ಸರಕಾರಿ ಮುಸ್ಲಿಂ ಎಲ್.ಪಿ. ಶಾಲೆ ಮತ್ತು ಅಂಗನವಾಡಿಯ ಮಕ್ಕಳನ್ನು ಸುರಕ್ಷತೆಯ ದೃಷ್ಟಿಯಿಂದ ಸಮೀಪದ ಕಟ್ಟಡಕ್ಕೆ ಸ್ಥಳಾಂತರಿಸಿ, ಅಲ್ಲಿ ತರಗತಿಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅವರ ಅಧ್ಯಕ್ಷತೆಯಲ್ಲಿ ಶಾಲೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಈ ಬಗ್ಗೆ ಕೆಲ ದಿನಗಳ ಹಿಂದೆ ನಮ್ಮ ಮೀಡಿಯಾ ಸಮಗ್ರ ವರದಿಯನ್ನು ಬಿತ್ತರಿಸಿ ಸಂಬಂದಪಟ್ಟವರ ಗಮನ ಸೆಳೆಯುವ ಪ್ರಯತ್ನ ನಡೆಸಿತ್ತು.
ಅಸುರಕ್ಷಿತ ಕಟ್ಟಡದಲ್ಲಿ ಶಾಲೆ ನಡೆಯುತ್ತಿರುವ ಕುರಿತಾದ ದೂರಿನ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ಶಿಕ್ಷಣ ಇಲಾಖೆಯಿಂದ ವರದಿ ಪಡೆದಿದ್ದರು. ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ತಕ್ಷಣದಿಂದಲೇ ಅನ್ವಯವಾಗುವಂತೆ ಶಾಲೆಯನ್ನು ಮತ್ತು ಅಂಗನವಾಡಿಯನ್ನು ಸಮೀಪದ ಮಸೀದಿ ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ಧಾರ ಕೈಗೊಳ್ಳಲಾಯಿತು. ಸಮಗ್ರ ತನಿಖೆಗೆ ಆದೇಶ ಅಪಾಯದ ಸ್ಥಿತಿಯಲ್ಲಿರುವ ಕಟ್ಟಡದಲ್ಲಿ ಇಲ್ಲಿಯವರೆಗೆ ಶಾಲೆ ಮತ್ತು ಅಂಗನವಾಡಿ ಹೇಗೆ ನಡೆಯುತ್ತಿತ್ತು ಎಂಬುದರ ಕುರಿತು ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
ಹೊಸ ಶಾಲಾ ಕಟ್ಟಡ ನಿರ್ಮಾಣ ಸೇರಿದಂತೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು, ಮಂಜೇಶ್ವರ ಗ್ರಾಮ ಪಂಚಾಯತ್, ಶಾಲಾ ಶಿಕ್ಷಕ-ರಕ್ಷಕ ಸಂಘ ಮತ್ತು ಶಿಕ್ಷಣ ಇಲಾಖೆಯ ಪ್ರತಿನಿಧಿಗಳೊಂದಿಗೆ ಜಂಟಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಈ ಸಭೆಯಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ್, ವಾರ್ಡ್ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಡಿ.ಡಿ.ಇ. ಇನ್-ಚಾರ್ಜ್ ಪಿ. ಸವಿತಾ, ಮಂಜೇಶ್ವರ ಎ.ಇ.ಒ. ಡಿ. ನಾರಾಯಣ, ಮುಖ್ಯೋಪಾಧ್ಯಾಯ ಎಂ. ಇಸ್ಮಾಯಿಲ್, ಮಂಜೇಶ್ವರ ತಹಶೀಲ್ದಾರ್ ಪಿ. ಪ್ರೇಮರಾಜ್, ಪಂಚಾಯತ್ ಕಾರ್ಯದರ್ಶಿ ಶಾನವಾಸ್, ಸಹಾಯಕ ಇಂಜಿನಿಯರ್ ಅಕ್ಷರಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು