ಕಾಸರಗೋಡು: ಜಿಲ್ಲೆಯ ಕಡಲತೀರದಲ್ಲಿ ತಲೆಯಿಲ್ಲದ ಸ್ಥಿತಿಯಲ್ಲಿ ಪುರುಷನೊಬ್ಬನ ಮೃತದೇಹ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಮೃತದೇಹವು ಸಂಪೂರ್ಣ ವಿರೂಪಗೊಂಡಿದ್ದು, ಮಾಂಸ ಕಳಚಿ ಮೂಳೆಗಳು ಕಾಣಿಸುವಷ್ಟು ಹದಗೆಟ್ಟಿರುವುದರಿಂದ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ.

ಶನಿವಾರ ಬೆಳಿಗ್ಗೆ ಸ್ಥಳೀಯರು ಮೃತದೇಹವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಟೌನ್ ಪೊಲೀಸರು ಮಹಜರು ನಡೆಸಿ, ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು.

ಪೊಲೀಸರ ಪ್ರಾಥಮಿಕ ಅಂದಾಜಿನ ಪ್ರಕಾರ, ಮೃತದೇಹಕ್ಕೆ ಸುಮಾರು ಒಂದೂವರೆ ತಿಂಗಳಷ್ಟು ಹಳೆಯದಾಗಿರಬಹುದು. ಮೂರು ದಿನಗಳೊಳಗೆ ಮೃತನ ಗುರುತು ಪತ್ತೆಯಾಗದಿದ್ದರೆ, ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತದೇಹ ತಲೆಯಿಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಪ್ರಕರಣದ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಮುದ್ರದಲ್ಲಿ ಅಪಘಾತ ಸಂಭವಿಸಿ ಮೃತದೇಹ ನೀರಿನಲ್ಲಿ ಕೊಚ್ಚಿಕೊಂಡು ಬಂದಿದ್ದರೆ, ಇಷ್ಟು ದೀರ್ಘಕಾಲ ಸಮುದ್ರದಲ್ಲೇ ಉಳಿಯುವುದು ಅಸಾಧ್ಯ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೃತನ ಗುರುತು ಪತ್ತೆಯಾದ ಬಳಿಕವೇ ಸಾವಿನ ನಿಖರ ಕಾರಣ ಬೆಳಕಿಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಾಪತ್ತೆಯಾಗಿರುವವರ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.


