ಕಾಸರಗೋಡು/ಕಣ್ಣೂರು: ಕಣ್ಣೂರಿನ ತಳಿಪರಂಬಿನ ಪೂಮಂಗಲಂನಲ್ಲಿ ವೃದ್ಧೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರವನ್ನು ಕಿತ್ತುಕೊಂಡು ದುಷ್ಕರ್ಮಿಯೊಬ್ಬ ಪರಾರಿಯಾದ ಘಟನೆ ನಡೆದಿದೆ. ಸಿಪಿಎಂ ತಳಿಪರಂಬು ಏರಿಯಾ ಸಮಿತಿ ಸದಸ್ಯ ಕೆ. ನಾರಾಯಣನ್ ಅವರ ಸಹೋದರಿ ಕಲ್ಯಾಣಿ (80) ಹಲ್ಲೆಗೊಳಗಾದವರು.

ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಕಲ್ಯಾಣಿಯವರ ಮನೆಯ ಪಕ್ಕದಲ್ಲಿ ವಾಸವಿರುವ, ಚಿತ್ರಮಂದಿರದಲ್ಲಿ ಕೆಲಸ ಮಾಡುವ ಕಾಸರಗೋಡು ಮೂಲದ ವ್ಯಕ್ತಿಯನ್ನು ಹುಡುಕಿಕೊಂಡು ಬಂದವನಂತೆ ಮುಖಗವಸು ಧರಿಸಿದ ವ್ಯಕ್ತಿ ನಟಿಸಿದ್ದಾನೆ. ಆತನಿಗೆ ಕೂಲಿ ಕೊಡಬೇಕಿದೆ, ಆದರೆ ಕರೆ ಮಾಡಿದರೂ ಬಾಗಿಲು ತೆರೆಯುತ್ತಿಲ್ಲ ಎಂದು ಹೇಳಿ ಕಲ್ಯಾಣಿಯವರ ನಂಬಿಕೆಯನ್ನು ಗಳಿಸಿದ್ದಾನೆ.

ನಂತರ ಮನೆಯ ಮೆಟ್ಟಿಲ ಮೇಲೆ ಕುಳಿತ ಆತ ನೀರು ಕೇಳಿದ್ದಾನೆ. ಕಲ್ಯಾಣಿ ನೀರು ತರಲು ಒಳಗೆ ಹೋಗಿ ಬಂದಾಗ, ಆತ ತನಗೆ ಅನಾರೋಗ್ಯ ಎಂದು ನಟಿಸಿ ಮಾತ್ರೆ ಕೇಳಿದ್ದಾನೆ. ಮಾತ್ರೆ ಇಲ್ಲದ ಕಾರಣ ಜಾಜಿಕಾಯಿ ನೀಡುವುದಾಗಿ ಹೇಳಿ ಕಲ್ಯಾಣಿ ಮತ್ತೆ ಒಳಗೆ ಹೋದ ಸಂದರ್ಭವನ್ನು ಬಳಸಿಕೊಂಡ ದುಷ್ಕರ್ಮಿ, ಅವರು ಹೊರಬರುತ್ತಿದ್ದಂತೆಯೇ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಕಲ್ಯಾಣಿಯವರ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿ ಬಂದರೂ, ಅಷ್ಟರಲ್ಲಿ ಆರೋಪಿ ಪರಾರಿಯಾಗಿದ್ದನು. ಮಾಹಿತಿ ತಿಳಿದ ತಕ್ಷಣ ತಳಿಪರಂಬು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.


