ಕಾಸರಗೋಡು:ಸ್ಥಳೀಯರ ಆರಾಧ್ಯ ದೈವವಾದ ನೆಟ್ಟಣಿಗೆ ಶ್ರೀಮಹತೋಭಾರ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಕಳ್ಳತನಕ್ಕೆ ಯತ್ನ ನಡೆದಿರುವ ಘಟನೆ ವರದಿಯಾಗಿದೆ.ರಾತ್ರಿ ವೇಳೆ ಸುತ್ತುಗೋಪುರದ ಬಾಗಿಲನ್ನು ಮುರಿದು ಒಳನುಗ್ಗಿದ ದುಷ್ಕರ್ಮಿಗಳು, ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಕದ್ದೊಯ್ದಿದ್ದಾರೆ.

ಆದರೆ, ಹುಂಡಿಯನ್ನು ಒಡೆಯಲು ಸಾಧ್ಯವಾಗದೆ ಹತಾಶರಾದ ಕಳ್ಳರು, ಅದನ್ನು ಸಮೀಪದ ರಸ್ತೆ ಬದಿಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ದೇವಸ್ಥಾನದ ಅರ್ಚಕರು ಪೂಜೆಗೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ತಕ್ಷಣವೇ ಎಚ್ಚೆತ್ತ ಕ್ಷೇತ್ರ ಆಡಳಿತ ಸಮಿತಿಯವರು ಆದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ದೇವಳದ ಭದ್ರತಾ ವೈಫಲ್ಯದ ಕುರಿತು ಚರ್ಚೆಯಾಗುತ್ತಿದ್ದರೂ, ದೇವರ ಹುಂಡಿ ಕಳುವಾದರೂ ಕಳ್ಳರಿಗೆ ಅದನ್ನು ತೆರೆಯಲು ಸಾಧ್ಯವಾಗದಿರುವುದನ್ನು ಸ್ಥಳೀಯ ಭಕ್ತರು ಪವಾಡವೆಂದು ಬಣ್ಣಿಸುತ್ತಿದ್ದಾರೆ.


