ಮಂಜೇಶ್ವರ : ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಆಟವಾಡುತ್ತಿದ್ದ ವೇಳೆ ಮಗುವಿನ ಕಣ್ಣಿಗೆ ಪೆನ್ಸಿಲ್ ಚುಚ್ಚಿ ಗಂಭೀರ ಗಾಯಗೊಂಡಿದೆ.ಉಪ್ಪಳದ ಎಎಲ್ಪಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಉಪ್ಪಳ ಕೈಕಂಬದ 3 ವರ್ಷದ ಎಲ್ಕೆಜಿ ವಿದ್ಯಾರ್ಥಿ ಈ ದುರ್ಘಟನೆಗೆ ತುತ್ತಾಗಿದ್ದಾನೆ. ಆಟವಾಡುತ್ತಿದ್ದಾಗ ಮಗುವಿನ ಬಲಕಣ್ಣಿಗೆ ಪೆನ್ಸಿಲ್ ತಗುಲಿ ತೀವ್ರ ಗಾಯವಾಗಿದೆ. ಆದರೆ, ಶಾಲೆ ಗಾಯಗೊಂಡ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಬದಲು ನೇರವಾಗಿ ಮನೆಗೆ ಕಳುಹಿಸಿಕೊಟ್ಟಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ನಂತರ ಪೋಷಕರು ಮಗುವನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಎರಡು ತುರ್ತು ಶಸ್ತ್ರಚಿಕಿತ್ಸೆಗಳನ್ನು ನಡೆಸಿದರೂ ಕಣ್ಣಿನ ದೃಷ್ಟಿ ಮರುಕಳಿಸಿಲ್ಲ. ಪ್ರಸ್ತುತ ಹೆಚ್ಚಿನ ಹಾಗೂ ತಜ್ಞ ಚಿಕಿತ್ಸೆಗಾಗಿ ಮಗುವನ್ನು ಕೊಯಂಬತ್ತೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು, ಕಂದಮ್ಮನ ಕಣ್ಣಿನ ದೃಷ್ಟಿ ಉಳಿಸುವ ಪ್ರಯತ್ನ ಮುಂದುವರಿದಿದೆ.

