ಮಂಜೇಶ್ವರ : ವರ್ಕಾಡಿ ಪಂಚಾಯತ್ನ ಪಾವೂರು ಪೊಯ್ಕೆ ಪ್ರದೇಶದಲ್ಲಿ ಕಾಡುಹಂದಿಗಳು ನಿಗೂಢವಾಗಿ ಸಾವನ್ನಪ್ಪಿರುವುದು ಹಲವು ಆತಂಕಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಹಂದಿ ಶವ ಪತ್ತೆಯಾದ ಸ್ಥಳಕ್ಕೆ ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಮರಣೋತ್ತರ ಪರೀಕ್ಷೆಗಾಗಿ ಹಂದಿಯ ಕಳೇಬರವನ್ನು ಕೊಂಡೊಯ್ಯಲಾಗಿದೆ.
ಕಳೆದ ಎರಡು ವಾರಗಳಿಂದ ಈ ಪರಿಸರದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಹಂದಿಗಳು ನಿಗೂಢವಾಗಿ ಸಾವನ್ನಪ್ಪುತ್ತಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.

ಈಗಾಗಲೇ ಈ ಪ್ರದೇಶದಲ್ಲಿ ಕೆಲವರಿಗೆ ಹಂದಿ ಜ್ವರ ಬಾಧಿಸಿರುವುದಾಗಿ ವರದಿಯಾಗಿದ್ದು, ಈಗ ಹಂದಿಗಳ ಸಾಮೂಹಿಕ ಸಾವು ಆತಂಕವನ್ನು ಇಮ್ಮಡಿಗೊಳಿಸಿದೆ. ಹಂದಿಗಳ ಈ ಅನಿರೀಕ್ಷಿತ ಸಾವಿಗೆ ನಿಖರವಾದ ಕಾರಣವೇನು ಎಂಬುದನ್ನು ತುರ್ತಾಗಿ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಊರವರು ಬಲವಾಗಿ ಒತ್ತಾಯಿಸಿದ್ದಾರೆ.

