ಪೈವಳಿಕೆ: ಪೈವಳಿಕೆ ಗ್ರಾ. ಪಂ. ನ ಸ್ಥಾಯೀ ಸಮಿತಿ ಅಧ್ಯಕ್ಷರುಗಳ ಆಯ್ಕೆಯಲ್ಲಿ ಮುಸ್ಲಿಂ ಲೀಗ್, ಕಾಂಗ್ರೆಸ್ ಪ್ರತಿನಿಧಿಗಳು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ ಆರಿಸುವ ಮೂಲಕ ಕೋ. ಲಿ. ಬಿ ಮೖತ್ರಿ ಬಹಿರಂಗವಾಗಿ ಬೆಳಕಿಗೆ ಬಂದಿದೆ ಎಂದು ಸಿಪಿಐಎಂ ಆರೋಪಿಸಿದೆ.
ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಯುಡಿಎಫ್-9, ಎಡರಂಗ-6, ಬಿಜೆಪಿ-5ಹಾಗೂ 1ಪಕ್ಷೇತರ ಎಂಬಂತೆ ಪೖವಳಿಕೆಯಲ್ಲಿ ಬಲಾಬಲವಿದೆ. ಇದರಂತೆ ಯುಡಿಎಫ್ ಆಡಳಿತ ನಡೆಸುವ ಪಂಚಾಯತಿನಲ್ಲಿ ಎರಡು ಪ್ರಮುಖ ಸ್ಥಾಯೀ ಸಮಿತಿ ಅಧ್ಯಕ್ಷ ಹುದ್ದೆಗಳನ್ನು ಬಿಜೆಪಿಗೆ ಯುಡಿಎಫ್ ದಾನ ಮಾಡಿದ್ದು, ಇದು ಚುನಾವಣಾ ಪೂರ್ವದಲ್ಲಿ ಯುಡಿಎಫ್-ಬಜೆಪಿ ನಡುವಣ ಮಾಡಿಕೊಂಡ ಒಳ ಒಪ್ಪಂದಕ್ಕೆ ಪ್ರತ್ಯಕ್ಷ ನಿದರ್ಶನ ಎಂದು ಸಿಪಿಐಎಂ ಆರೋಪಿಸಿದೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಪಂಚಾಯತುಗಳಲ್ಲಿ ಯುಡಿಎಫ್ -ಬಿಜೆಪಿ ನಡುವೆ ಒಳ ಒಪ್ಪಂದಗಳು ನಡೆದಿವೆ. ಇದಕ್ಕೆ ವಿವಿಧ ಫಲಿತಾಂಶಗಳೇ ನಿದರ್ಶನ. ಪುತ್ತಿಗೆ ಜಿ ಪಂ. ಡಿವಿಜನ್ ನಲ್ಲಿ ಬಿಜೆಪಿ ತನ್ನ ಮತವನ್ನು ಕಾಂಗ್ರೆಸ್ ಅಭ್ಯರ್ಥಿಗೆ ಹಂಚಿಕೊಂಡಿದೆ. ಇದೇ ರೀತಿ ಪುತ್ತಿಗೆ ಪಂಚಾಯತಿನಲ್ಲಿ ಯುಡಿಎಫ್-ಬಿಜೆಪಿ ಒಳ ಒಪ್ಪಂದದಿಂದ ಎಡರಂಗವನ್ನು ಪರಾಭವಗೊಳಿಸಿದೆ.ಇದೇ ರೀತಿ ಮೀಂಜ, ವರ್ಕಾಡಿ ಹಾಗೂ ರಾಜ್ಯ ವ್ಯಾಪಕ ಎಡರಂಗದ ಸೋಲಿಗೆ ಬಿಜೆಪಿ ಜತೆ ಲೀಗ್, ಕಾಂಗ್ರೆಸ್ ಕೖ ಜೋಡಿಸಿದೆ ಎಂದು ಸಿಪಿಐಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿಶಕೆ. ಆರ್. ಜಯಾನಂದ ಆರೋಪಿಸಿದರು.
ಇದು ಮುಂಬರುವ ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ನಡೆದಿರುವ ರಹಸ್ಯ ಒಪ್ಪಂದದ ಪ್ರತೀಕವಾಗಿದೆ. ಮತ ಧರ್ಮಗಳ ಹೆಸರಲ್ಲಿ ಕಚ್ಚಾಡುವ ಲೀಗ್ ಮತ್ತು ಬಿಜೆಪಿ ಆಶಯಗಳನ್ನು ಗಾಳಿಗೆ ತೂರಿ ಅಧಿಕಾರಕ್ಕಾಗಿ ಗುಪ್ತ ಒಪ್ಪಂದಗಳಿಂದ ಕೖ ಜೋಡಿಸಿರುವುದು ಮತದಾರರಿಗೆ ಮಾಡುತ್ತಿರುವ ವಂಚನೆಯಾಗಿದೆ. ಈ ಒಳ ಒಪ್ಪಂದ ಮಂಜೇಶ್ವರದಲ್ಲಿ ಈ ಹಿಂದೆಯೂ ನಡೆದಿದ್ದು, 1987ರಲ್ಲಿ ನಡೆದ ಒಳ ಒಪ್ಪಂದವನ್ನು ಕೆ. ಜಿ. ಮಾರಾರ್ ಅವರು ತಮ್ಮ ಜೀವನಚರಿತ್ರೆ ಕೃತಿಯಲ್ಲಿ ಉಲ್ಲೇಖಿಸಿದ್ದಾರೆಂದು ಕೆ. ಆರ್. ಜಯಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.