ಮಂಜೇಶ್ವರ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಪವಿತ್ರ ‘ಈದುಲ್ ಅಝಾ’ (ಬಕ್ರೀದ್) ಹಬ್ಬವನ್ನು ಮಂಜೇಶ್ವರ ತಾಲೂಕಿನಾದ್ಯಂತ ಗುರುವಾರ ಅತ್ಯಂತ ಭಕ್ತಿ, ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.
ಬೆಳಿಗ್ಗೆಯಿಂದಲೇ ನವವಸ್ತ್ರಧಾರಿಗಳಾದ ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಪವಿತ್ರ ಈದ್ ನಮಾಜ್ ಸಲ್ಲಿಸಿದ ಬಳಿಕ, ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಹಲವು ಮಸೀದಿಗಳಲ್ಲಿ ಮಹಿಳೆಯರಿಗೂ ಪ್ರಾರ್ಥನೆ ಸಲ್ಲಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಮಂಜೇಶ್ವರ ತಾಲೂಕಿನ ವಿವಿಧ ಮಸೀದಿಗಳಲ್ಲಿ ಧಾರ್ಮಿಕ ವಿಧಿವಿಧಾನಗಳು ಹಾಗೂ ವಿಶೇಷ ಪ್ರಾರ್ಥನೆಗಳು ನೆರವೇರಿದವು. ಪ್ರಮುಖವಾಗಿ ಉದ್ಯಾವರ, ಕುಂಜತ್ತೂರು, ಪೊಸೋಟು, ಬಂಗ್ರ ಮಂಜೇಶ್ವರ, ಮತ್ತು ಉಪ್ಪಳ ಜುಮಾ ಮಸೀದಿಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ಅಲ್ಲದೆ, ಕುಂಜತ್ತೂರು ಮಸ್ಜಿದ್ ನೂರ್, ಕುಂಜತ್ತೂರು ದಾರುಸ್ಸಲಾಂ ಸಲಫಿ ಮಸೀದಿ ಹಾಗೂ ಚೌಕಿ ಸಿರಾಜುಲ್ ಹುದಾ ಮಸೀದಿ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ಈದ್ ನಮಾಜ್ ಮತ್ತು ಪ್ರಾರ್ಥನೆಗಳು ಶಾಂತಿಯುತವಾಗಿ ಹಾಗೂ ಶ್ರದ್ಧಾಪೂರ್ವಕವಾಗಿ ನೆರವೇರಿದವು.
ಕುಂಜತ್ತೂರು ದಾರುಸ್ಸಲಾಂ ಸಲಫಿ ಮಸೀದಿಯಲ್ಲಿ ನಡೆದ ಪ್ರಾರ್ಥನೆಗೆ ಮೊಹಮ್ಮದಲಿ ಸಲಫಿ ನೇತೃತ್ವ ನೀಡಿದರೆ ಮಸ್ಜಿದ್ ನೂರ್ ನಲ್ಲಿ ನಡೆದ ಪ್ರಾರ್ಥಣೆಗೆ ಹನೀಸ್ ಮದನಿ ನೇತೃತ್ವ ನೀಡಿದರು.