ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವೊಂದು ಅಂಗಡಿಗಳಲ್ಲಿ ಬೆಲೆ ಪಟ್ಟಿಯನ್ನು ಪ್ರದರ್ಶಿಸದೆ, ಗ್ರಾಹಕರಿಂದ ನಿಗದಿತ ದರಕ್ಕಿಂತ ಅಧಿಕ ಹಣವನ್ನು ವಸೂಲಿ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮಂಜೇಶ್ವರ ಗ್ರಾಹಕರ ವೇದಿಕೆಯು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನು ಒತ್ತಾಯಿಸಿದೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಗ್ರಾಹಕರ ವೇದಿಕೆಯ ಅಧ್ಯಕ್ಷ ಮುರಳಿಧರ್ ಭಟ್ ಮತ್ತು ಉಪಾಧ್ಯಕ್ಷ ಸಂಜೀವ ಶೆಟ್ಟಿ, ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರನ್ನು ಸುಲಿಗೆ ಮಾಡುತ್ತಿರುವ ವ್ಯಾಪಾರಿಗಳನ್ನು ತಕ್ಷಣವೇ ಗುರುತಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಈ ರೀತಿಯ ಅಕ್ರಮಗಳ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದು ವೇದಿಕೆ ಎಚ್ಚರಿಸಿದೆ.

ಗ್ರಾಹಕರಿಗೆ ದೂರುಗಳೇನಾದರೂ ಇದ್ದರೆ ಬಂದ್ಯೋಡ್ ನಲ್ಲಿರುವ ತಾಲೂಕು ಸರಬರಾಜು ಅಧಿಕಾರಿ ಕಚೇರಿಯನ್ನು ಸಂಪರ್ಕಿಸಿ ನೇರವಾಗಿ ದೂರು ನೀಡಬಹುದು – ಸಂಪರ್ಕ ಸಂಖ್ಯೆ: 04998-230089 ಅಥವಾ ಮೊಬೈಲ್: 9188527415.
ಅದೇ ರೀತಿ ಸಹಾಯಕ ನಿಯಂತ್ರಕರು – ಫ್ಲೈಯಿಂಗ್ ಸ್ಕ್ವಾಡ್ ಕಾನೂನು ಮಾಪನಶಾಸ್ತ್ರ, ಕಾಸರಗೋಡು.
ಮೊಬೈಲ್ ಸಂಖ್ಯೆ: 8281698132
ಇಮೇಲ್: acksd.lmd@kerala.gov.in ಅದೇ ರೀತಿ ರಾಷ್ಟ್ರೀಯ ಗ್ರಾಹಕರ ಸಹಾಯವಾಣಿ
ನೀವು ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕವೂ ದೂರು ದಾಖಲಿಸಬಹುದು:
ಸಹಾಯವಾಣಿ ಸಂಖ್ಯೆ: 1915 (ಟೋಲ್-ಫ್ರೀ).
ವಾಟ್ಸಪ್: 8800001915 ಗೆ ಸಂದೇಶ ಕಳುಹಿಸಿ.
ವೆಬ್ಸೈಟ್: consumerhelpline.gov.in ನಲ್ಲಿ ದೂರು ನೋಂದಾಯಿಸಿ ಕೊಳ್ಳಬಹುದು. ಇದ್ಯಾವುದರಲ್ಲೂ ಪರಿಹಾರ ಸಿಗದಿದ್ದರೆ ಒಂದು ವೇಳೆ ಸಮಸ್ಯೆ ಗಂಭೀರವಾಗಿದ್ದರೆ ಕಾಸರಗೋಡಿನ ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದೆಂದು ಗ್ರಾಹಕರ ವೇದಿಕೆ ಪದಾಧಿಕಾರಿಗಳು ತಿಳಿಸಿದ್ದಾರೆ.


