ನರೇಂದ್ರ ಮೋದಿ ಸರ್ಕಾರ ಸುಶಾಸನದ ಮಾದರಿ: ನವ್ಯಾ ಹರಿದಾಸ್

ಪೆರ್ಲ: ನರೇಂದ್ರ ಮೋದಿ ಸರ್ಕಾರವು ಸುಶಾಸನಕ್ಕೆ ಜಗತ್ತಿನ ದೇಶಗಳಿಗೇ ಮಾದರಿಯಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಸೇರಿದಂತೆ ಭಾರತ ಸಾಧಿಸಿರುವ ಪ್ರಗತಿಯು ಮುಂದುವರಿದ ದೇಶಗಳನ್ನೂ ಬೆರಗುಗೊಳಿಸಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ನವ್ಯಾ ಹರಿದಾಸ್ ತಿಳಿಸಿದ್ದಾರೆ. ಬಿಜೆಪಿ ಕುಂಬಳೆ ಮಂಡಲ ಹಮ್ಮಿಕೊಂಡಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ್ ಮಹಾ ಅಭಿಯಾನದ ದ್ವಿದಿನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದೇಶದ ಅರ್ಧದಷ್ಟಿರುವ ಮಹಿಳಾ ಸಮಾಜದ ಕಲ್ಯಾಣವನ್ನು ಖಾತರಿಪಡಿಸಲು ನರೇಂದ್ರ ಮೋದಿ ಸರ್ಕಾರಕ್ಕೆ ಸಾಧ್ಯವಾಗಿದೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಸಾಧಿಸಲಾಗಿದೆ ಎಂದು ಅವರು ಬೆರಳು ಮಾಡಿ ತೋರಿಸಿದರು.

ಮೋದಿ ಸರ್ಕಾರದ ಅಭಿವೃದ್ಧಿ ಸಾಧನೆಗಳನ್ನು ಜನರಿಗೆ ತಲುಪಿಸಲು ಮತ್ತು ಮತದಾರರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕಾಗಿ ಶ್ರಮಿಸಲು ಸಾಧ್ಯವಾಗಿದ್ದೇ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ವಿಜಯಕ್ಕೆ ಕಾರಣವಾಯಿತು ಎಂದು ಅವರು ಹೇಳಿದರು. ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ಆದಂತೆ ಕೇರಳದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವ ಕಾಲ ದೂರವಿಲ್ಲ ಎಂದು ನವ್ಯಾ ಹರಿದಾಸ್ ಉಪಸಂಹಾರದಲ್ಲಿ ನುಡಿದರು.

ಬಿಜೆಪಿ ಕುಂಬಳೆ ಮಂಡಲದ ಉಪಾಧ್ಯಕ್ಷ ವಿಕ್ರಮ್ ಪೈ ಅಧ್ಯಕ್ಷತೆ ವಹಿಸಿದ್ದರು.

ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಎಂ. ಎಲ್. ಅಶ್ವಿನಿ, ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಅಡ್ವ. ವಿ. ಬಾಲಕೃಷ್ಣ ಶೆಟ್ಟಿ, ಸತೀಶ್ ಚಂದ್ರ ಭಂಡಾರಿ, ಕೋಝಿಕೋಡ್ ವಲಯ ಉಪಾಧ್ಯಕ್ಷ ವಿಜಯ್ ಕುಮಾರ್ ರೈ, ಜಿಲ್ಲಾ ಉಪಾಧ್ಯಕ್ಷರಾದ ಪಿ. ರಮೇಶ್, ಮುರಳೀಧರ್ ಯಾದವ್, ರಾಜ್ಯ ಕೌನ್ಸಿಲ್ ಸದಸ್ಯ ಜಯಂತ ಪಾಟಾಳಿ, ಎಸ್‌ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ನಾರಾಯಣ ನಾಯಕ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ಎಸ್., ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಕೆ.ಪಿ. ವತ್ಸರಾಜ್, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ. ಮತ್ತು ರೂಪವಾಣಿ ಭಟ್ ಮಾತನಾಡಿದರು.

ಪೆರ್ಲ ಶಂಕರ ಸದನದಲ್ಲಿ ನಡೆಯುತ್ತಿರುವ ದ್ವಿದಿನ ಪ್ರಶಿಕ್ಷಣ ಶಿಬಿರದಲ್ಲಿ ಜನಪ್ರತಿನಿಧಿಗಳು ಹಾಗೂ ಪಕ್ಷದ ಪದಾಧಿಕಾರಿಗಳು ಸೇರಿದಂತೆ ನೂರರಷ್ಟು ಮಂದಿ ಭಾಗವಹಿಸುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!