ಪುತ್ತೂರು:ಮಂಜಲ್ಪಡು ಭಾಗದಲ್ಲಿ ವಿವಿಧ ಜಾತಿಯ ಮರಗಳನ್ನು ತುಂಡರಿಸಿದ ಮತ್ತು ಬನ್ನೂರಿನ ಸೇಡಿಯಾಪಿನಲ್ಲಿ ಪರವಾನಿಗೆ ಪಡೆದ ಜಾಗಕ್ಕಿಂತ ಅಧಿಕ ಪ್ರದೇಶದ ಮರ ಕಡಿದ ಕುರಿತು ಪುತ್ತೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜಲ್ಪಡು ಭಾಗದಲ್ಲಿ ಡಿವೈಎಸ್ಪಿ ಕಚೇರಿ ಬಳಿಯೇ ಮರಗಳನ್ನು ಕಟಾವು ಮಾಡಲಾಗಿದೆ ಎಂಬ ಆರೋಪದಲ್ಲಿ ವಳತ್ತಡ್ಕ ನಿವಾಸಿ ಸಂದೀಪ್ ಆರ್.ಎಂಬವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.ಅಕೇಶಿಯ ಹೈಬ್ರಿಡ್ ಮರದ ಸುಮಾರು 50ಕ್ಕೂ ಅಧಿಕ ದಿಮ್ಮಿಗಳನ್ನು ಹಾಗೂ ಮ್ಯಾಂಜಿಯಮ್, ಗಾಳಿ ಮರಗಳ ದಿಮ್ಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸ್ ಉಪಾಧಿಕ್ಷಕರ ಕಛೇರಿಗೆ ಅಪಾಯಕಾರಿಯಾಗಿದೆ ಎಂಬ ಅರ್ಜಿಯನ್ನಿಟ್ಟುಕೊಂಡು ಅಕ್ಕಪಕ್ಕದ ಜಮೀನಿನ ಮರಗಳನ್ನು ತೆಗೆದಿದ್ದಾರೆಂಬ ಆರೋಪ ಕೇಳಿ ಬಂದಿದೆ. ಬನ್ನೂರು ಸೇಡಿಯಾಪಿನಲ್ಲಿ ಪರವಾನಿಗೆ ಪಡೆದ ಜಾಗಕ್ಕಿಂತ ಅಧಿಕ ಪ್ರದೇಶದ ಮರ ಕಡಿದ ಆರೋಪದಲ್ಲಿ ಸರಪಾಡಿ ಅಜಿಲಮೊಗರು ನಿವಾಸಿ ಫಾರೂಕ್ ಪಿ ಎಂಬವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.ಮೆಡಿಕಲ್ ಕಾಲೇಜು ಕಾಮಗಾರಿಗೆ ಹಲವು ಪ್ರದೇಶದಲ್ಲಿ ಮರ ಕಡಿಯಲು ಪರವಾನಿಗೆಯಾಗಿದ್ದು, ಇದರ ಹೊರತಾಗಿಯೂ ಕೆಲವು ಪ್ರದೇಶದ ಮರ ಕಡಿದ ಬಗ್ಗೆ ಹಲವು ದಿಮ್ಮಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯಿಂದ ಮಾಹಿತಿ ಲಭಿಸಿದೆ.


