ಕಾಸರಗೋಡು: ಕರ್ನಾಟಕ ಮತ್ತು ಕೇರಳ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ವಾಹನಗಳ ಬ್ಯಾಟರಿ ಹಾಗೂ ಹುಂಡಿ ಕಳವು ಮಾಡುತ್ತಿದ್ದ ಕುಖ್ಯಾತ ಆರೋಪಿ ನೆಲ್ಲಿಕಟ್ಟೆ ನಿವಾಸಿ ಉಮ್ಮರ್ ಫಾರೂಕ್ (46) ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕಳೆದ ತಿಂಗಳು ಮಾವಿನಕಟ್ಟೆ ಕ್ಷೇತ್ರದಿಂದ ಕಾಣಿಕೆ ಹುಂಡಿ ಹಾಗೂ ಅಡಿಕೆ ಕಳವುಗೈದ ಪ್ರಕರಣದ ಪ್ರಮುಖ ಸೂತ್ರಧಾರನಾಗಿರುವ ಈತನಿಗಾಗಿ ಪೊಲೀಸರು ಹಲವು ತಿಂಗಳಿಂದ ಹುಡುಕಾಟ ನಡೆಸುತ್ತಿದ್ದರು.
ಈತನ ಸಹಚರ ಸಾಬಿತ್ ಈಗಾಗಲೇ ಬದಿಯಡ್ಕ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಉಮ್ಮರ್ ಫಾರೂಕ್ ಕುಂಬಳೆ ಠಾಣೆಯ ಕೊಲೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ.

ಪೊಲೀಸರಿಗೆ ಸಿಗದಿರಲು ಮೊಬೈಲ್ ಬಳಸದ ಈತ, ಪರರ ಫೋನ್ನಿಂದ ಮನೆಗೆ ಕರೆ ಮಾಡುತ್ತಿದ್ದ. ಕಾಞಂಗಾಡ್ ಬಾರ್ ಬಳಿ ಕರೆ ಮಾಡಿ ಸಿಕ್ಕಿಬಿದ್ದ ಈತ, ಪೊಲೀಸರಿಂದ ತಪ್ಪಿಸಿಕೊಳ್ಳಲು ಪೊದೆಗೆ ಹಾರಿ ಅವಿತುಕೊಂಡಿದ್ದರೂ, ಪೊಲೀಸರು ಸಾಹಸಿಕವಾಗಿ ಸೆರೆಹಿಡಿದಿದ್ದಾರೆ.

