ಬಂಟ್ವಾಳ, ಆ.20: “ಹೈನುಗಾರರಿಂದ ಪಡೆದ ಹಾಲಿನಿಂದ ಬರುವ ಲಾಭಾಂಶವನ್ನು ಮತ್ತೆ ಹೈನುಗಾರರಿಗೆ ನೀಡುವ ಪರಿಕಲ್ಪನೆ ಕೇವಲ ಹಾಲು ಒಕ್ಕೂಟದಲ್ಲಿ ಮಾತ್ರ ಇದೆ. ಖಾಸಗಿ ವ್ಯವಸ್ಥೆಯಲ್ಲಿ ಈ ಪರಿಕಲ್ಪನೆಯೇ ಇಲ್ಲ. ಕಳೆದ 25 ವರ್ಷಗಳಿಂದ ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘ ಹಾಲು ಉತ್ಪಾದನೆಯಲ್ಲಿ ಮಹೋನ್ನತ ಸಾಧನೆ ಮಾಡಿದ್ದು, ದಕ್ಷ ಹಾಗೂ ಪ್ರಾಮಾಣಿಕ ಆಡಳಿತ ಮಂಡಳಿಯ ಕಾರಣದಿಂದ ಇದು ಸಾಧ್ಯವಾಗಿದೆ” ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು.

ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ರಜತ ಮಹೋತ್ಸವ ಕಾರ್ಯಕ್ರಮ ಫರ್ಲಾ ವೆಲಂಕಣಿ ಚರ್ಚ್ ಸಭಾಂಗಣದಲ್ಲಿ ಗುರುವಾರ ನಡೆಯಿತು. ಕಾರ್ಯಕ್ರಮವನ್ನು ರವಿರಾಜ್ ಹೆಗ್ಡೆ ಉದ್ಘಾಟಿಸಿದರು.
ಒಕ್ಕೂಟದಲ್ಲಿ ಹಾಲು ಸಂಗ್ರಹದ ಪ್ರಮಾಣ ಹೆಚ್ಚಾಗುತ್ತಿದೆ. ಹೈನುಗಾರರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಪರಿಚಯಿಸಲಾಗಿದ್ದು, ಕರು ಹುಟ್ಟುವಲ್ಲಿಂದ ಸಾಯುವವರೆಗೆ ಅನುಕೂಲವಾಗುವಂತಹ ಯೋಜನೆಗಳಿವೆ. ವಿವಿಧ ರೀತಿಯ ಸಹಾಯಧನವೂ ಲಭ್ಯವಿದ್ದು, ಹೈನುಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ದ.ಕ. ಹಾಲು ಒಕ್ಕೂಟದ ನಿರ್ದೇಶಕ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ, ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘ ಸಾರ್ಥಕ ಕಾರ್ಯದ ಮೂಲಕ ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಸಂಘವಾಗಿ ಮೂಡಿಬಂದಿದೆ ಎಂದು ಶ್ಲಾಘಿಸಿದರು.
ಸಂಘದ ಅಧ್ಯಕ್ಷ ಸದಾನಂದ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಸಕ್ತ ಅವಧಿಯ ನಿರ್ದೇಶಕ ಮಂಡಳಿ ಹಾಗೂ ನೌಕರರ ಪ್ರಾಮಾಣಿಕ ಕಾರ್ಯದ ಕಾರಣದಿಂದ ಸಂಘವು ರಜತ ಸಂಭ್ರಮವನ್ನು ಕಾಣುವಂತಾಗಿದೆ ಎಂದರು.
ಒಕ್ಕೂಟದ ನಿರ್ದೇಶಕರಾದ ಸವಿತಾ ಎನ್. ಶೆಟ್ಟಿ ಹಾಗೂ ನಂದರಾಮ ರೈ ಬೆಳ್ಳೂರು ಶುಭ ಹಾರೈಸಿದರು. ಫರ್ಲಾ ಚರ್ಚ್ನ ಧರ್ಮಗುರು ವಂ. ಫಾ. ಮಾರ್ಕ್ ಅರುಣ್ ಡಿಸೋಜ ಅವರು ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯವನ್ನು ಶ್ಲಾಘಿಸಿದರು.

ಒಕ್ಕೂಟದ ಉಪವ್ಯವಸ್ಥಾಪಕಿ ಜಾನೆಟ್ ರೊಸಾರಿಯೊ, ವಿಸ್ತರಣಾಧಿಕಾರಿ ಪ್ರಫುಲ್ಲಾ, ಪಶುವೈದ್ಯಾಧಿಕಾರಿ ಡಾ. ಚರಣ್, ನಾವೂರು ಸಂಘದ ಉಪಾಧ್ಯಕ್ಷ ಸುರೇಶ್ ಯು.ಕೆ. ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
ಸಂಘದ ಶ್ರೇಯಸ್ಸಿಗೆ ಶ್ರಮಿಸಿದವರನ್ನು ಹಾಗೂ ಅತೀ ಹೆಚ್ಚು ಹಾಲು ನೀಡುವ ಹೈನುಗಾರರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸ್ಟೀವನ್ ಕ್ಯಾಸ್ಟಲಿನೊ ಸ್ವಾಗತಿಸಿದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಉಷಾ ವರದಿ ವಾಚಿಸಿದರು. ಉಮಾಶಂಕರ್ ಕಾರ್ಯಕ್ರಮ ನಿರ್ವಹಿಸಿದರು.

