ಜನೌಷಧಿ ಕೇಂದ್ರಗಳಲ್ಲಿ ಮೂಲ ಉದ್ದೇಶವೇ ಮರೆತಿದೆ: ಯು.ಟಿ. ಖಾದರ್

ಮಂಗಳೂರು: ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧ ಒದಗಿಸುವ ಉದ್ದೇಶದಿಂದ ಆರಂಭಿಸಲಾದ ಜನೌಷಧಿ ಕೇಂದ್ರಗಳ ಕಾರ್ಯವೈಖರಿ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದರು .

ಈ ಯೋಜನೆ ಆರಂಭಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿದ್ದಾಗಲೇ, ಔಷಧಗಳ ಗುಣಮಟ್ಟ ಹಾಗೂ ಪೂರೈಕೆ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದೆ ಎಂದು ತಾನು ಸಲಹೆ ನೀಡಿದೆ . ಜನೌಷಧಿ ಕೇಂದ್ರಗಳಿಗೆ ಔಷಧ ಪೂರೈಕೆ ಮಾಡುವಾಗ ಕಡಿಮೆ ದರ ನೀಡುವ ಎಲ್-1 ಬಿಡ್‌ದಾರರಿಗೆ ಆದ್ಯತೆ ನೀಡಲಾಗುತ್ತದೆ. ಆದರೆ ಗುಣಮಟ್ಟದ ಔಷಧ ತಯಾರಿಸುವ ಕಂಪನಿಗಳು ಅಷ್ಟೊಂದು ಕಡಿಮೆ ದರದಲ್ಲಿ ಪೂರೈಕೆ ಮಾಡಲು ಮುಂದೆ ಬರುವುದಿಲ್ಲ. ಇದರಿಂದ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದುರಾಗುತ್ತವೆ ಎಂದು ಹೇಳಿದರು.

ಅಷ್ಟೇ ಅಲ್ಲದೆ, ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಿಗೆ ನಿರಂತರವಾಗಿ ಔಷಧ ಪೂರೈಸಲು ಸೂಕ್ತ ಲಾಜಿಸ್ಟಿಕ್ಸ್ ವ್ಯವಸ್ಥೆ ಇಲ್ಲದಿರುವುದು ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ. ಆರಂಭದಲ್ಲಿ ಔಷಧ ಪೂರೈಸಿ, ನಂತರ ನಿರಂತರ ಪೂರೈಕೆ ಮಾಡದಿದ್ದರೆ, ಕೇಂದ್ರ ನಡೆಸುವವರು ಬೇರೆ ಕಂಪನಿಗಳಿಂದ ಔಷಧ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ಸರ್ಕಾರದ ಜನೌಷಧಿ ಕೇಂದ್ರವೆಂದು ನಂಬಿ ಬರುವ ಬಡ ಹಾಗೂ ಸಾಮಾನ್ಯ ಜನರಿಗೆ ಅಲ್ಲಿ ಬೇರೆ ಕಂಪನಿಗಳ ಔಷಧಗಳನ್ನು ನೀಡಿದರೆ, ಅದು ಜನರಿಗೆ ಆಗುವ ಮೋಸವಾಗಿದೆ. ಜನೌಷಧಿ ಕೇಂದ್ರಗಳಲ್ಲಿ ಸರ್ಕಾರ ನಿಗದಿಪಡಿಸಿದ ಔಷಧಗಳೇ ಲಭ್ಯವಾಗುವಂತೆ ಕಟ್ಟುನಿಟ್ಟಿನ ವ್ಯವಸ್ಥೆ ಇರಬೇಕು ಎಂದು ಯು.ಟಿ. ಖಾದರ್ ಒತ್ತಾಯಿಸಿದರು.

ಇಂದು ಕೆಲವು ಜನೌಷಧಿ ಕೇಂದ್ರಗಳಲ್ಲಿ ಔಷಧಗಳ ಬದಲು ಕಾಸ್ಮೆಟಿಕ್ಸ್, ಸೋಪು, ಟೂತ್‌ಬ್ರಷ್ ಸೇರಿದಂತೆ ವಿವಿಧ ವಸ್ತುಗಳು ಸಿಗುತ್ತಿವೆ. ಆದರೆ ಜನರಿಗೆ ಅಗತ್ಯವಿರುವ ಜನೌಷಧವೇ ಸಮರ್ಪಕವಾಗಿ ಲಭ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ ಎಂದು ಸಚಿವರು ಟೀಕಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!