“ಮರೆಯುತ್ತಿರುವವರನ್ನು ನಾವು ನೆನಪಿಸಿಕೊಳ್ಳೋಣ”; ಕದ್ರಿ ಪಾರ್ಕ್‌ನಲ್ಲಿ ಜಾಗೃತಿ ಕಾರ್ಯಕ್ರಮ

ಮಂಗಳೂರು: ವಯೋವೃದ್ಧರ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಪೀಪಲ್ಸ್ ಅಸೋಸಿಯೇಷನ್ ಫಾರ್ ಜೆರಿಯಾಟ್ರಿಕ್ ಎಂಪವರ್‌ಮೆಂಟ್ (PAGE) ವತಿಯಿಂದ ವಿಶ್ವ ಅಲ್ಝೈಮರ್ಸ್ ತಿಂಗಳ ಆಚರಣೆಗೆ ಸೆಪ್ಟೆಂಬರ್ 1ರಂದು ಚಾಲನೆ ನೀಡಲಾಗುವುದು.

ಬೆಳಗ್ಗೆ 7 ಗಂಟೆಯಿಂದ 10.30ರವರೆಗೆ ನಗರದ ಕದ್ರಿ ಪಾರ್ಕ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, “ಮರೆಯುತ್ತಿರುವವರನ್ನು ನಾವು ನೆನಪಿಸಿಕೊಳ್ಳೋಣ” ಎಂಬ ಸಂದೇಶದೊಂದಿಗೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು PAGE ಅಧ್ಯಕ್ಷ ಡಾ. ಸಿ.ವಿ. ರಘುವೀರ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕವಾಗಿ ಡಿಮೆನ್ಷಿಯಾ ಸಮಸ್ಯೆ ತೀವ್ರವಾಗಿ ಹೆಚ್ಚುತ್ತಿದ್ದು, ಭಾರತದಲ್ಲೂ ಲಕ್ಷಾಂತರ ಮಂದಿ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಸ್ತುತ ವಿಶ್ವದಲ್ಲಿ ಸುಮಾರು 55 ಮಿಲಿಯನ್ ಮಂದಿ ಡಿಮೆನ್ಷಿಯಾದಿಂದ ಬಳಲುತ್ತಿದ್ದು, 2030ರ ವೇಳೆಗೆ ಈ ಸಂಖ್ಯೆ 78 ಮಿಲಿಯನ್‌ಗೆ ಹಾಗೂ 2050ರ ವೇಳೆಗೆ 139 ಮಿಲಿಯನ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಭಾರತದಲ್ಲಿ ಸುಮಾರು 8.8 ಮಿಲಿಯನ್ ಮಂದಿ ಡಿಮೆನ್ಷಿಯಾ ಸಮಸ್ಯೆಯಿಂದ ಬಳಲುತ್ತಿದ್ದರೂ, ಶೇಕಡಾ 90ಕ್ಕೂ ಹೆಚ್ಚು ಪ್ರಕರಣಗಳು ಇನ್ನೂ ಪತ್ತೆಯಾಗದೆ ಹಾಗೂ ಸೂಕ್ತ ಚಿಕಿತ್ಸೆ ಪಡೆಯದೆ ಉಳಿದಿವೆ ಎಂದು ಹೇಳಿದರು.

ವಯೋವೃದ್ಧರ ಆರೈಕೆ, ಡಿಮೆನ್ಷಿಯಾ ಹಾಗೂ ಅಲ್ಝೈಮರ್ಸ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಅಲ್ಝೈಮರ್ಸ್ ತಿಂಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ PAGE ಉಪಾಧ್ಯಕ್ಷೆ ಡಾ. ಪ್ರಭಾ ಅಧಿಕಾರಿ ಎಂ.ಆರ್., ಕಾರ್ಯದರ್ಶಿ ಜೆರಾರ್ಡಿನ್ ಡಿಸೋಜಾ ಹಾಗೂ ಜಂಟಿ ಕಾರ್ಯದರ್ಶಿ ಮತ್ತು ಖಜಾಂಚಿ ಮೋಹನ್‌ರಾಜ್ ಉಪಸ್ಥಿತರಿದ್ದರು.

SHARE
Loading spinner

One thought on ““ಮರೆಯುತ್ತಿರುವವರನ್ನು ನಾವು ನೆನಪಿಸಿಕೊಳ್ಳೋಣ”; ಕದ್ರಿ ಪಾರ್ಕ್‌ನಲ್ಲಿ ಜಾಗೃತಿ ಕಾರ್ಯಕ್ರಮ

Leave a Reply

Your email address will not be published. Required fields are marked *

error: Content is protected !!