ಮಂಜೇಶ್ವರ : ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕಡಂಬಾರಿನಲ್ಲಿರುವ ಯುವ ಅಧ್ಯಾಪಿಕೆ ಹಾಗೂ ಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೈದ ಘಟನೆಯಲ್ಲಿ ನಿಗೂಢತೆ ಹೆಚ್ಚಾಗುತ್ತಿದೆ. ಸ್ಕೂಟರಿನಲ್ಲಿ ಆಗಮಿಸಿದ ಇಬ್ಬರು ಮಹಿಳೆಯರು ಅಧ್ಯಾಪಿಕೆಯನ್ನು ದೂಡಿ ಹಲ್ಲೆಗೈಯುತ್ತಿರುವ ಸಿ ಸಿ ಟಿವಿ ದೃಶ್ಯ ಬೆಳಕಿಗೆ ಬಂದಿರುವುದು ನಿಗೂಢತೆಯನ್ನು ಹೆಚ್ಚಿಸಿದೆ.
ಕಡಂಬಾರಿನ ಅಜಿತ್ (35) ಹಾಗೂ ಪತ್ನಿ ಖಾಸಗಿ ಶಾಲೆಯೊಂದರ ಅಧ್ಯಾಪಿಕೆಯಾಗಿರುವ ಶ್ವೇತಾ (27) ಎಂಬಿವರು ಮಂಗಳವಾರದಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಸ್ಪಂಧಿಸದೆ ಸಾವನ್ನಪಿದ್ದರು. ಈ ಸಂದರ್ಭ 3 ವರ್ಷ ಪ್ರಾಯದ ಮಗುವನ್ನು ಬಂದ್ಯೋಡ್ ನಲ್ಲಿರುವ ಅಜಿತ್ ನ ಸಹೋದರಿಯ ಮನೆಯಲ್ಲಿ ಕೊಟ್ಟು ಮರಳಿದ ಬಳಿಕ ಈ ದಂಪತಿ ವಿಷ ಸೇವಿಸಿದ್ದಾರೆ.
ಅಜಿತ್ ಗಾಗಲೀ ಪತ್ನಿ ಶ್ವೇತಾಳಿಗಾಗಲೀ ಅಷ್ಟೊಂದು ಗಂಭೀರ ಸಮಸ್ಯೆಗಳೇನೂ ಇದ್ದಿಲ್ಲವೆಂದು ಸಂಬಂಧಿಕರು ಹೇಳುತಿದ್ದಾರೆ. ಈ ಮಧ್ಯೆ ಸ್ಕೂಟರಿನಲ್ಲಿ ಶ್ವೇತಾಳ ಮನೆ ಪರಿಸರಕ್ಕೆ ಆಗಮಿಸಿದ ಇಬ್ಬರು ಮಹಿಳೆಯರ ಪೈಕಿ ಸ್ಕೂಟರಿನಿಂದ ಇಳಿದ ಒಂದು ಮಹಿಳೆ ಶ್ವೇತಾಳೊಂದಿಗೆ ವಾಗ್ವಾದ ನಡೆಸಿ ಬಳಿಕ ದೂಡಿ ನಂತ್ರ ಹಲ್ಲೆ ನಡೆಸಿದ ದೃಶ್ಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹಲ್ಲೆಗೈದಿರುವುದು ಹತ್ತಿರದ ಸಂಬಂಧಿಕೆಯಾಗಿರುವುದಾಗಿಯೂ ಆಭರಣ ಅಡವಿರಿಸಿದ ವಿಷಯದಲ್ಲಿ ತರ್ಕ ನಡೆದಿರುವುದಾಗಿಯೂ ಸ್ಥಳೀಯರು ಹೇಳುತಿದ್ದಾರೆ.ಅದೇ ರೀತಿ ವಿಷ ಸೇವಿಸಿ ದಂಪತಿಗಳು ನರಳುತ್ತಿರುವಾಗ ಫೋನ್ ಕರೆಯೊಂದು ಬಂದು ಸ್ಥಳೀಯರೊಬ್ಬರು ಮಾತನಾಡಿದಾಗ ಫೈನಾನ್ಸ್ ಕಂಪನಿಯಿಂದ ಕರೆಯುತ್ತಿರುವುದಾಗಿಯೂ ಸಾಲ ಬಾಕಿ ಇರುವುದಾಗಿಯೂ ಹೇಳಿದ್ದಾಗಿ ತಿಳಿದು ಬಂದಿದೆ. ಸಾರ್ವಜನಿಕ ಸ್ಥಳದಲ್ಲಿ ಹಲ್ಲೆಗೈದಿರುವ ಬೇಸರದಿಂದ ಅಧ್ಯಾಪಿಕೆ ಹಾಗೂ ಪತಿ ಈ ತೀರ್ಮಾನಕ್ಕೆ ಬಂದಿರಬಹುದೇ ಎಂಬ ಶಂಕೆ ಕೂಡಾ ವ್ಯಕ್ತವಾಗುತ್ತಿದೆ.ಅಂತೂ ಇನ್ನು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದಲೇ ಬಹಿರಂಗಗೊಳ್ಳಬೇಕಾಗಿದೆ.