ಸರಕಾರಿ ಆಸ್ಪತ್ರೆಗಳನ್ನು ಖಾಸಗೀ ವೈದ್ಯಕೀಯ ಕಾಲೇಜು ವೈದ್ಯರ ಕೈಗೊಪ್ಪಿಸುವ ಕರಾರು ಒಪ್ಪಂದ ರದ್ದುಗೊಳಿಸಬೇಕು, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು, ಕಿದ್ವಾಯಿ ಸ್ಮಾರಕ ಕ್ಯಾನ್ಸರ್, ಜಯದೇವ ಹೃದ್ರೋಗ ಆಸ್ಪತ್ರೆಗಳನ್ನು ಸ್ಥಾಪನೆ ಮಾಡಬೇಕು , ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆ ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು ಎಂಬುದೂ ಸೇರಿದಂತೆ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ ಖಾಸಗೀ ಆಸ್ಪತ್ರೆಗಳ ನಿಯಂತ್ರಿಸಲು ಒತ್ತಾಯಿಸಿ ಇಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಇದರಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿವರೆಗೆ ಉಸ್ತುವಾರಿ ಕಚೇರಿ ಚಲೋ ಪಾದಯಾತ್ರೆಯನ್ನೂ ಸಂಘಟಿಸಲಾಗಿತ್ತು.
ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆ ಮುಂಭಾಗದಿಂದ ಪಾದಯಾತ್ರೆ ಪ್ರಾರಂಭಗೊಂಡಿತು. ಪಾದಯಾತ್ರೆಗೆ ಹಿರಿಯ ವಿಚಾರವಾದಿ ಪ್ರೋ ನರೇಂದ್ರ ನಾಯಕ್ ಚಾಲನೆ ನೀಡಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ ಕೆ ಇಮ್ತಿಯಾಜ್ ಕಳೆದ ಹಲವು ವರುಷಗಳಿಂದ ಸಂಘಟನೆ ಇಟ್ಟಿರುವ ಬೇಡಿಕೆಯನ್ನು ರಾಜ್ಯದ ಕಾಂಗ್ರೇಸ್ ಸರಕಾರ ಕಡೆಗಣಿಸಿದೆ . ಆರೋಗ್ಯ ಇಲಾಖೆ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ಬದಲು ಖಾಸಗೀ ಆಸ್ಪತ್ರೆಗಳ ಲಾಬಿಗೆ ಶರಣಾಗಿದೆ. ವಿರೋಧ ಪಕ್ಷ ಬಿಜೆಪಿ ಕೂಡ ಈ ಬಗ್ಗೆ ಮೌನ ವಹಿಸಿದ್ದು, ಜಿಲ್ಲೆಯ ಕಾಂಗ್ರೇಸ್ ಮತ್ತು ಬಿಜೆಪಿ ಖಾಸಗೀ ಆಸ್ಪತ್ರೆಗಳ ಲಾಬಿಯ ಬಗೆಗೆ ಒಂದೇ ತರವಾದ ಒಲವನ್ನು ಹೊಂದಿವೆ ಎಂದು ಆರೋಪಿಸಿದರು.
ಡಿವೈಎಫ್ಐ ಮುಂದಿಟ್ಟಿರುವ ಬೇಡಿಕೆ ಈಡೇರುವವರೆಗೂ ಚಳುವಳಿ ಮುನ್ನಡೆಯಲಿದೆ ಎಂದವರು ಘೋಷಿಸಿದರು. ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡುತ್ತಾ ಜಿಲ್ಲೆಯಲ್ಲಿ ಹೃದಯ ಮತ್ತು ಕ್ಯಾನ್ಸರ್ ಕಾಯಿಲೆಗಳಿಗೆ ಒಳಗಾದವರ ಸಂಖ್ಯೆ ಒಂದೇ ವರುಷದಲ್ಲಿ ನೂರುಪಟ್ಟು ಹೆಚ್ಚಳಗೊಂಡಿದೆ. ಇಲ್ಲಿ ಕಿದ್ವಾಯಿ ಜಯದೇವ ಆಸ್ಪತ್ರೆಗಳ ಬೇಡಿಕೆ ಇದ್ದರೂ ಆರೋಗ್ಯ ಮಂತ್ರಿ ಜಿಲ್ಲೆಯ ಜನರ ಆರೋಗ್ಯದ ಹಕ್ಕನ್ನು ಕಡೆಗಣಿಸಿದ್ದಾರೆ. ಸರಕಾರಿ ಆಸ್ಪತ್ರೆ ಬಲಪಡಿಸಲು ನಡೆಸುವ ಹೋರಾಟಗಳಿಗೆ ಅನುಮತಿ ನಿರಾಕರಿಸುವ ಮೂಲಕ ಹತ್ತಿಕ್ಕಲು ಮಾಡಿರುವ ಪ್ರಯತ್ನದಿಂದ ಡಿವೈಎಫ್ಐ ಹಿಂದೆ ಸರಿಯೋದಿಲ್ಲ ಎಂದರು.
ಜನರ ಆರೋಗ್ಯ ಹಕ್ಕನ್ನು ಖಾತ್ರಿಪಡಿಸಲು ಆರೋಗ್ಯ ಮಂತ್ರಿ ಗುಂಡುರಾವ್ ಸಾದ್ಯವಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ತೊಲಗಿ ಬಿಡಲಿ ಎಂದವರು ಹೇಳಿದರು. ಸರಕಾರಿ ವೆನ್ಲಾಕ್ ಆಸ್ಪತ್ರೆಯಿಂದ ಆರಂಭಗೊಂಡ ಯುವಜನರ ನಡಿಗೆಯು ಖಾಸಗೀ ಆಸ್ಪತ್ರೆಗಳ ಕಾರಿಡಾರ್ ಅಥೆನಾ, ಇಂದಿರಾ, ಯುನಿಟಿ, ಹೈಲ್ಯಾಂಡ್ ಆಸ್ಪತ್ರೆಗಳ ಮುಂಭಾಗದಿಂದ ಸಾಗಿತು. ಉಸ್ತುವಾರಿ ಮಂತ್ರಿಗಳ ಕಚೇರಿ ತಲುಪುವ ಮೊದಲೇ ಪೊಲೀಸರು ಯುವಜನರ ನಡಿಗೆಯನ್ನು ತಡೆಯಲು ಪ್ರಯತ್ನಿಸಿದರು. ಪೊಲೀಸರ ಮತ್ತು ಹೋರಾಟಗಾರರ ನಡುವೆ ತಿಕ್ಕಾಟ ನಡೆದು ಡಿವೈಎಫ್ಐ ನಾಯಕರು ಸಹಿತ ನೂರಾರು ಕಾರ್ಯಕರ್ತರನ್ನು ಬಂಧಿಸಿದರು. ಬಂಧನದ ವೇಳೆ ಪ್ರತಿಭಟನಾಕಾರರು ಉಸ್ತುವಾರಿ ಮಂತ್ರಿ ದಿನೇಶ್ ಗುಂಡುರಾವ್, ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರು, ನಿತಿನ್ ಕುತ್ತಾರ್, ರಿಜ್ವಾನ್ ಹರೇಕಳ, ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ಅಶ್ರಫ್ ಹರೇಕಳ, ರಜಾಕ್ ಮುಡಿಪು, ಹನೀಫ್ ಬೆಂಗರೆ, ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಬಿ.ಎಮ್ ಭಟ್, ಶಶಿಧರ್ ಶಕ್ತಿನಗರ, ಮಹಿಳಾ ಸಂಘಟನೆಯ ಮುಖಂಡರಾದ ಕಿರಣ ಪ್ರಭಾ, ಪ್ರಮಿಳಾ ಶಕ್ತಿನಗರ, ಅಸುಂತ ಡಿಸೋಜ, ರೋಹಿಣಿ ಜಲ್ಲಿಗುಡ್ಡೆ, ದಲಿತ ಹಕ್ಕುಗಳ ಸಮಿತಿಯ ಕೃಷ್ಣ ತಣ್ಣೀರುಬಾವಿ, ಕೃಷ್ಣ ಇನ್ನಾ, ಸಮುದಾಯದ ವಾಸುದೇವ ಉಚ್ಚಿಲ, ರಮೇಶ್ ಉಳ್ಳಾಲ, ಮಹಾಬಲ ಟಿ ದೆಪ್ಪೆಲಿಮಾರ್, ಶೇಖರ್ ಕುಂದರ್, ಇಬ್ರಾಹಿಂ ಮದಕ, ಅಬೂಬಕ್ಕರ್ ಜಲ್ಲಿ, ನಾಸಿರ್ ಬಾಸ್, ಬಿಲಾಲ್ , ಸುನೀಲ್ ತೇವುಲ, ಶ್ರೀನಾಥ್ ಕಾಟಿಪಳ್ಳ, ಮಕ್ಸೂದು ಸುರತ್ಕಲ್, ಅಜ್ಮಲ್ ಕಾನ, ತಸ್ರೀಫ್ ಬೆಂಗರೆ, ನೌಶದ್ ಬೆಂಗರೆ, ಯಶ್ ರಾಜ್ ಬಜಾಲ್, ದಿರಾಜ್ ಬಜಾಲ್, ದೀಪಕ್ ಬಜಾಲ್ , ವಿದ್ಯಾರ್ಥಿ ಸಂಘಟನೆಯ ವಿನುಶ ರಮಣ ಭಟ್, ಅಭಿಶೇಕ್ ಬೆಳ್ತಂಗಡಿ, ನಝೀರ್ ಕಕ್ಕಿಂಜೆ, ರಜಾಕ್ ಮೊಂಟೆಪದವು, ಸಂಕೇತ್ ಕುತ್ತಾರ್ , ಅಲೆಮಾರಿ ಸಮುದಾಯದ ವೆಂಕಟೇಶ್, ಲಕ್ಷ್ಮಣ ಮುಂತಾದವರು ಉಪಸ್ಥಿತರಿದ್ದರು.