ದ.ಕ ಜಿಲ್ಲೆ ಮಂಗಳೂರು ತಾಲೂಕಿನ ಕಾಟಿಪಳ್ಳ ಗ್ರಾಮ, ಚೊಕ್ಕಬೆಟ್ಟು, ಕೃಷ್ಣಮಠ ರಸ್ತೆಯ ಶ್ರೀಮತಿ ರೇಖಾ ಎಂಬವರ ಬಾಡಿಗೆ ಮನೆಯಲ್ಲಿ ಕಳೆದ 05 ವರ್ಷಗಳಿಂದ ಶಿವಲೀಲಾ ಮತ್ತು ಆಕೆಯ ಇಬ್ಬರು ಮಕ್ಕಳಾದ ಸೋಮನಾಥ ಮತ್ತು ಮಲ್ಲಿಕಾರ್ಜುನ ರವರ ವಾಸ್ತವ್ಯವಿದ್ದು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ.

ದಿನಾಂಕ: 19-07-2026 ರಂದು ರಾತ್ರಿ 11.00 ಗಂಟೆಗೆ ಆರೋಪಿಯಾದ ಸೋಮನಾಥ, ಪ್ರಾಯ 21 ವರ್ಷ, ತಂದೆ: ದಿ|| ಪರಸಪ್ಪ, ವಾಸ: ರೇಖಾ ರವರ ಬಾಡಿಗೆ ಮನೆ, ಚೊಕ್ಕಬೆಟ್ಟು, ಮಂಗಳೂರು ತಾಲೂಕು, ಖಾಯಂ ವಾಸ: ತಗ್ಯಾಳ ಗ್ರಾಮ, ಕುಷ್ಠಗಿ ತಾಲೂಕು, ಕೊಪ್ಪಳ ಜಿಲ್ಲೆ, ಎಂಬಾತನು ಆತನ ತಮ್ಮನಾದ ಮಲ್ಲಿಕಾರ್ಜುನ ರವರು ಯಾವುದೋ ಹುಡುಗಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದು ಆ ಸಮಯ ಆರೋಪಿತನು ವಿರೋಧವನ್ನು ವ್ಯಕ್ತಪಡಿಸಿದ್ದು ಇದಕ್ಕೆ ತಮ್ಮನಾದ ಮಲ್ಲಿಕಾರ್ಜುನನು ಉಡಾಫೆಯಿಂದ ಆರೋಪಿಗೆ ಬೈದಿದ್ದರಿಂದ ಕೋಪಗೊಂಡ ಆರೋಪಿತನು ತನ್ನ ತಮ್ಮ ಮಲ್ಲಿಕಾರ್ಜುನನು ಮಲಗಿದ ನಂತರ ಮನೆಯಲ್ಲಿಯೇ ಇದ್ದ ಕೊಡಲಿಯಿಂದ ತಲೆ ಹಾಗೂ ಮುಖಕ್ಕೆ ತೀವ್ರ ಸ್ವರೂಪದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿರುತ್ತಾನೆ.

ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂಬ್ರ 89/2026 ಕಲಂ 103(1) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿರುವುದಾಗಿದೆ. ಆರೋಪಿ ಸೋಮನಾಥನು ಕೃಷ್ಣಾಪುರ ಮಠ ರಸ್ತೆಯ ಪರಿಸರದಲ್ಲಿ ಪೊದೆಯಲ್ಲಿ ಅವಿತುಕೊಂಡಿದ್ದವನನ್ನು ಪತ್ತೆಮಾಡಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಲಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಸದ್ರಿ ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.


