ಸರಕಾರಿ ಆಸ್ಪತ್ರೆ ಕಡೆಗಣಿಸುವಲ್ಲಿ ಬಿಜೆಪಿ ಕಾಂಗ್ರೇಸನದ್ದು ಒಂದೇ ಬಗೆಯ ನೀತಿ – ಸುನೀಲ್ ಕುಮಾರ್ ಬಜಾಲ್

ಸರಕಾರಿ ಆಸ್ಪತ್ರೆಗಳನ್ನು ಸಕಲ ಮೂಲಭೂತ ಸೌಕರ್ಯಗಳ ಸಹಿತ ಮೇಲ್ದರ್ಜೆಗೇರಿಸುವ ಬದಲಾಗಿ ಖಾಸಗೀ ಆಸ್ಪತ್ರೆಗಳ ಹಿತಾಸಕ್ತಿಯನ್ನೇ ಬಯಸುವವರಲ್ಲಿ ಆಳುವ ಪಕ್ಷ ಕಾಂಗ್ರೇಸಾಗಲಿ ಅಥವಾ ಬಿಜೆಪಿಯಾಗಲಿ ಇವರಿಬ್ಬರು ಒಂದೇ ಬಗೆಯ ನೀತಿ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ ಮಾರ್ಕ್ಸ್‌ವಾದಿ (ಸಿಪಿಐಎಂ )ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್ ಅವರು ಇಂದು ( 18-7-26) ಪಡೀಲು ಜಂಕ್ಷನ್, ನಗರ ಆರೋಗ್ಯ ಕೇಂದ್ರದ ಬಳಿ ಸಿಪಿಐಎಂ ಬಜಾಲ್ ವಿಭಾಗ ಸಮಿತಿ ನೇತೃತ್ವದಲ್ಲಿ ನಡೆದ ಮಾನವ ಸರಪಳಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಯಾನ್ಸರ್ ಮತ್ತು ಹೃದ್ರೋಗ ಕಾಯಿಲೆ ವಿಪರೀತವಾಗಿ ಏರಿಕೆಯಾಗುತ್ತಿದೆ. ವೆನ್ಲಾಕಿನಲ್ಲಿ ಕ್ಯಾಥ್ ಲಾಬ್ ಪ್ರಾರಂಭವಾಗಿ ಕೆಲವೇ ತಿಂಗಳಲ್ಲಿ ಸಾವಿರಕ್ಕೂ ಮಿಕ್ಕಿ ಹೃದ್ರೋಗ ಕಾಯಿಲೆಗೆ ಯಶಸ್ವಿ ಚಿಕಿತ್ಸೆ ಪಡೆದುಕೊಂಡಿದ್ದಾರೆಂದು ಕೊಚ್ಚಿಕೊಳ್ಳುವ ಆರೋಗ್ಯ ಇಲಾಖೆ ಒಂದು ಅರ್ಥಮಾಡಿಕೊಳ್ಳಬೇಕು. ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಹೃದ್ರೋಗ ಕಾಯಿಲೆಗೆ ಜನ ತುತ್ತಾಗುತ್ತಿದ್ದಾರೆಂದರೆ ಇಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆಯ ಅನಿವಾರ್ಯತೆ ಇವತ್ತಿನ ತುರ್ತು ಎಂಬುದನ್ನು. ಈ ಜಿಲ್ಲೆಗೊಂದು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಜಯದೇವ ಹೃದ್ರೋಗ ಆಸ್ಪತ್ರೆ ಘಟಕವನ್ನು ಸ್ಥಾಪಿಸಬೇಕೆಂದು ಸಿಪಿಐಎಂ ಪಕ್ಷ ಸರಣಿ ಹೋರಾಟಗಳನ್ನು ನಡೆಸುತ್ತಿದ್ದರೂ ಆಳುವ ಸರಕಾರಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ. ವಿರೋಧ ಪಕ್ಷ ಬಿಜೆಪಿಯ ಯಾವೊಬ್ಬ ಶಾಸಕ, ಸಂಸದರೂ ಮಾತಾಡುತ್ತಿಲ್ಲ ಎಂದರೆ ಇವರಿಬ್ಬರೂ ಈ ಜಿಲ್ಲೆಯಲ್ಲಿ ಯಾರ ಪರವಾದ ಧೋರಣೆಯನ್ನು ಬಯಸುತ್ತಿದ್ದಾರೆಂದು ಜನ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು. ಸಿಪಿಐಎಂ ಸರಕಾರದ ಮುಂದಿಟ್ಟಿರುವ ಬೇಡಿಕೆಯನ್ನು ಕೂಡಲೇ ಈಡೇರಿಸಲು ಮುಂದಾಗಬೇಕು , ಖಾಸಗೀ ಆಸ್ಪತ್ರೆಗಳೊಂದಿಗೆ ಮಾಡಿರುವ ಕರಾರು ಒಪ್ಪಂದವನ್ನು ಕೂಡಲೇ ರದ್ದುಗೊಳಿಸಲು ಒತ್ತಾಯಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ನಗರ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಂಗಳೂರಿನ ನಗರ ಆರೋಗ್ಯ ಕೇಂದ್ರಗಳೆಲ್ಲದರಲ್ಲಿ ವೈದ್ಯರು ಸಹಿತ ಅಗತ್ಯ ಸಿಬ್ಬಂದಿಗಳನ್ನು ಖಾಯಂಗೊಳಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಬೇಕು. ಆರೋಗ್ಯ ಕೇಂದ್ರದ ಸಮಯದ ಅವಧಿಯನ್ನು ವಿಸ್ತರಿಸಬೇಕು. ಅಲ್ಲದೆ ಗರ್ಭಿಣಿಯರಿಗೆ ಮಾಡುತ್ತಿದ್ದ ಥೈರಾಯ್ಡ್ ಪರೀಕ್ಷೆಯನ್ನು ಮತ್ತೆ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.ಸಿಪಿಐಎಂ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಸಂತೋಷ್ ಬಜಾಲ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜಯಂತಿ ಬಿ ಶೆಟ್ಟಿ, ನಗರ ಸಮಿತಿ ಸದಸ್ಯರಾದ ಜಯಲಕ್ಷ್ಮಿ ಜಪ್ಪಿನಮೊಗರು, ದಿನೇಶ್ ಶೆಟ್ಟಿ, ಲೋಕೇಶ್ ಎಂ, ಸಿಪಿಐಎಂ ಸ್ಥಳೀಯ ಮುಖಂಡರಾದ ಉದಯಚಂದ್ರರೈ, ವರಪ್ರಸಾದ್, ಗೀತಾ ಜಲ್ಲಿಗುಡ್ಡೆ, ಜಯಪ್ರಕಾಶ್ ಜಲ್ಲಿಗುಡ್ಡೆ, ಇಸಾಕ್ ಕಣ್ಣೂರು, ಅಶೋಕ್ ಸಾಲ್ಯಾನ್, ರೋಹಿಣಿ ಜಲ್ಲಿಗುಡ್ಡೆ, ಆಟೋ ಚಾಲಕರ ಸಂಘಟನೆಯ ಮುಖಂಡರಾದ ಲತೀಫ್ ಪಕ್ಕಲಡ್ಕ, ಡಿವೈಎಫ್ಐ ಮುಖಂಡರಾದ ಧೀರಾಜ್ ಬಜಾಲ್, ಯಶ್ ರಾಜ್, ದೀಕ್ಷಿತ್ ಭಂಡಾರಿ, ಪ್ರೀತೇಶ್ ಬಜಾಲ್, ಪ್ರಕಾಶ್ ಶೆಟ್ಟಿ, ಪ್ರಶಾಂತ್ ಕುಡ್ತಡ್ಕ ಮುಂತಾದವರು ಉಪಸ್ಥಿತರಿದ್ದರು.


ಪ್ರತಿಭಟನೆಯಲ್ಲಿ ಸಿಪಿಐಎಂ ಬಜಾಲ್ ವಿಭಾಗ ಸಮಿತಿ ಕಾರ್ಯದರ್ಶಿ ದೀಪಕ್ ಬಜಾಲ್ ನಿರೂಪಿಸಿದರು ಜಗದೀಶ್ ಬಜಾಲ್ ವಂದಿಸಿದರು.
ಪಡೀಲ್ ರಾಷ್ಟೀಯ ಹೆದ್ದಾರಿಯುದ್ದಕ್ಕೂ ಮಾನವ ಸರಪಳಿ ನಿರ್ಮಿಸಿ ಸರಕಾರಿ ಆಸ್ಪತ್ರೆ ಬಲಪಡಿಸುವ ಬೇಡಿಕೆಗಳ ಘೋಷಣೆಗಳನ್ನು ಕೂಗಿ ಒತ್ತಾಯಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!