ಮಂಗಳೂರು: ನಗರದ ಪ್ರಮುಖ ಪ್ರವೇಶ ದ್ವಾರವಾಗಿರುವ ಕೂಳೂರು–ಬೈಕಂಪಾಡಿ ರಸ್ತೆಯ ಅವ್ಯವಸ್ಥೆ ಹಾಗೂ ನಿರಂತರ ಸಂಚಾರ ದಟ್ಟಣೆಯಿಂದ ವಾಹನ ಸವಾರರು, ಆಟೋ ಹಾಗೂ ಬಸ್ ಚಾಲಕರು, ಪಾದಚಾರಿಗಳು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ರಸ್ತೆಯ ಗುಂಡಿಗಳಿಗೆ ತಾತ್ಕಾಲಿಕವಾಗಿ ಮಣ್ಣು ಹಾಗೂ ಜಲ್ಲಿ ಹಾಕಿ ದುರಸ್ತಿ ಮಾಡಲಾಗುತ್ತಿದ್ದರೂ, ಮಳೆ ಬಂದ ಬಳಿಕ ಮತ್ತೆ ಗುಂಡಿಗಳು ನಿರ್ಮಾಣವಾಗುತ್ತಿವೆ. ಸಮರ್ಪಕ ಡಾಂಬರೀಕರಣ ಮಾಡದೆ ಕೈಗೊಳ್ಳುತ್ತಿರುವ ತಾತ್ಕಾಲಿಕ ಕಾಮಗಾರಿಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೂಳೂರು ಆಟೋ ಚಾಲಕ ಅಬ್ದುಲ್ ರಝಾಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆಯ ಗುಂಡಿಗಳಿಂದ ಆಟೋರಿಕ್ಷಾಗಳ ವೀಲ್ ಬೇರಿಂಗ್ ಸೇರಿದಂತೆ ಹಲವು ಬಿಡಿಭಾಗಗಳು ಪದೇಪದೇ ಹಾನಿಗೊಳಗಾಗುತ್ತಿದ್ದು, ದುರಸ್ತಿ ವೆಚ್ಚವನ್ನು ಚಾಲಕರೇ ಭರಿಸಬೇಕಾಗಿದೆ. ಹಲವು ಬಾರಿ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇನ್ನು ಕೂಳೂರು ಭಾಗದಲ್ಲಿ ಕಳೆದೊಂದು ವಾರದಿಂದ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿದ್ದು, ಬೆಳಗ್ಗೆ ಹಾಗೂ ಸಂಜೆ ವೇಳೆ ಗಂಟೆಗಟ್ಟಲೆ ವಾಹನಗಳು ಟ್ರಾಫಿಕ್ನಲ್ಲಿ ಸಿಲುಕಿಕೊಳ್ಳುತ್ತಿವೆ ಎಂದು ಸ್ಥಳೀಯರಾದ ಹರೀಶ್ ತಿಳಿಸಿದ್ದಾರೆ. ರಸ್ತೆ ದಾಟುವುದಕ್ಕೂ ಪಾದಚಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಈ ಭಾಗದಲ್ಲಿ ಈ ಹಿಂದೆ ಹಲವು ಅಪಘಾತಗಳು ಸಂಭವಿಸಿವೆ ಎಂದು ಅವರು ಹೇಳಿದ್ದಾರೆ.

ಟ್ರಾಫಿಕ್ ಜಾಮ್ನಿಂದ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ದಿನನಿತ್ಯದ ಸಂಚಾರಕ್ಕೂ ತೀವ್ರ ತೊಂದರೆಯಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಸಮಯಕ್ಕೆ ತಲುಪದೆ ವಿಮಾನ ತಪ್ಪಿಸಿಕೊಳ್ಳುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಆಸ್ಪತ್ರೆಗಳಿಗೆ ತೆರಳುವವರು ಹಾಗೂ ತುರ್ತು ಸೇವೆಗಳ ವಾಹನಗಳಿಗೂ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗಿದೆ ಎಂದು ಬಸ್ ಚಾಲಕ ಸಿದ್ದಿಕ್ ತಿಳಿಸಿದ್ದಾರೆ.
ಕೂಳೂರು ರಸ್ತೆಯ ಅವ್ಯವಸ್ಥೆಯಿಂದ ಬಸ್ ಸಂಚಾರದ ಮೇಲೂ ಪರಿಣಾಮ ಬೀರುತ್ತಿದೆ. ನಿಗದಿತ ಸಮಯಕ್ಕೆ ಬಸ್ಗಳು ತಲುಪಲು ಸಾಧ್ಯವಾಗದೆ ಪ್ರಯಾಣಿಕರು ಹಾಗೂ ಸಿಬ್ಬಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಲವೊಮ್ಮೆ ಮೂರು–ನಾಲ್ಕು ಗಂಟೆಗಳವರೆಗೂ ಟ್ರಾಫಿಕ್ ಜಾಮ್ ಉಂಟಾಗುವುದರಿಂದ ಬಸ್ ಚಾಲನೆ ಮಾಡುವುದು ಆತಂಕದ ಕೆಲಸವಾಗಿದೆ ಎಂದು ಸಿದ್ದಿಕ್ ಹೇಳಿದ್ದಾರೆ. ಸಮಯಕ್ಕೆ ಸರಿಯಾಗಿ ಸಂಚರಿಸಲಾಗದ ಪರಿಣಾಮ ಬಸ್ಗಳ ಕಲೆಕ್ಷನ್ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಷನ್ನ ದಕ್ಷಿಣ ಕನ್ನಡ ವಿಭಾಗದ ಜಿಲ್ಲಾಧ್ಯಕ್ಷ ಸಂದೀಪ್ ಸಾಲಿಯಾನ್ ಅವರು ಕೂಡ ರಸ್ತೆ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಳೂರು ರಸ್ತೆ ಮಂಗಳೂರು ನಗರಕ್ಕೆ ಪ್ರವೇಶಿಸುವ ಪ್ರಮುಖ ಮಾರ್ಗವಾಗಿದ್ದು, ವಿಮಾನ ನಿಲ್ದಾಣ, ಹಾರ್ಬರ್ ಹಾಗೂ ಎ.ಜೆ. ಆಸ್ಪತ್ರೆ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇಂತಹ ಮಹತ್ವದ ರಸ್ತೆಯೇ ಹದಗೆಟ್ಟಿರುವುದು ವಿಷಾದನೀಯ ಎಂದು ಅವರು ಹೇಳಿದ್ದಾರೆ.
ಕೂಳೂರು ಸರ್ವಿಸ್ ರಸ್ತೆಯ ಪರಿಸ್ಥಿತಿಯೂ ಸಮರ್ಪಕವಾಗಿಲ್ಲ. ವಿಮಾನ ನಿಲ್ದಾಣದ ಕಡೆಯಿಂದ ಮಂಗಳೂರಿನತ್ತ ಸಂಚರಿಸುವ ಸರ್ವಿಸ್ ರಸ್ತೆಯ ಸಮಸ್ಯೆಯನ್ನು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಂದೀಪ್ ಸಾಲಿಯಾನ್ ಆರೋಪಿಸಿದ್ದಾರೆ.
ಇದೇ ವೇಳೆ ಕೂಳೂರು ಜಂಕ್ಷನ್ನಿಂದ ಬೈಕಂಪಾಡಿ ಹಾಗೂ ಸುರತ್ಕಲ್ವರೆಗಿನ ರಸ್ತೆ ಅವ್ಯವಸ್ಥೆ ವಿರುದ್ಧ ರಾಜಕೇಸರಿ ಸೇವಾ ಟ್ರಸ್ಟ್ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂತೋಷ್ ಕೊಲ್ಯ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಳೂರು ಜಂಕ್ಷನ್ನಿಂದ ಬೈಕಂಪಾಡಿವರೆಗಿನ ಸುಮಾರು 2ರಿಂದ 3 ಕಿಲೋಮೀಟರ್ ರಸ್ತೆ ಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಪ್ರತಿದಿನ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಭಾಗದಲ್ಲಿ ಬಂದರು, ಎಂಸಿಎಫ್ ಸೇರಿದಂತೆ ಹಲವು ಪ್ರಮುಖ ಕೈಗಾರಿಕೆಗಳಿರುವುದರಿಂದ ಭಾರಿ ವಾಹನಗಳ ಸಂಚಾರವೂ ಹೆಚ್ಚಾಗಿದೆ. ಆದರೆ ಸರ್ವಿಸ್ ರಸ್ತೆಗಳ ಸ್ಥಿತಿಯೂ ಹದಗೆಟ್ಟಿರುವುದರಿಂದ ವಾಹನಗಳು ಅನಿವಾರ್ಯವಾಗಿ ಮುಖ್ಯ ರಸ್ತೆಯನ್ನೇ ಅವಲಂಬಿಸಬೇಕಾಗಿದೆ ಎಂದು ಸಂತೋಷ್ ಕೊಲ್ಯ ತಿಳಿಸಿದ್ದಾರೆ.
ಪಾದಚಾರಿಗಳಿಗೆ ರಸ್ತೆ ದಾಟಲು ಸಮರ್ಪಕ ವ್ಯವಸ್ಥೆ ಇಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ. ಶಾಲಾ ಮಕ್ಕಳ ಸಂಚಾರದ ಸಮಯದಲ್ಲಿ ಟ್ರಾಫಿಕ್ ಜಾಮ್ ಮತ್ತಷ್ಟು ತೀವ್ರವಾಗುತ್ತಿದ್ದು, ಅಪಘಾತದ ಆತಂಕವೂ ಎದುರಾಗಿದೆ ಎಂದು ಅವರು ಹೇಳಿದ್ದಾರೆ.

ರಸ್ತೆ ಹಾಗೂ ಸಂಚಾರ ಸಮಸ್ಯೆಗೆ ಪೊಲೀಸ್ ಸಂಚಾರ ಇಲಾಖೆ, ಮಹಾನಗರ ಪಾಲಿಕೆ, ಪಿಡಬ್ಲ್ಯುಡಿ, ಸಾರಿಗೆ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೂಳೂರು ರಸ್ತೆ ಸಮಸ್ಯೆಗೆ ಯಾವುದೇ ರಾಜಕೀಯ ಬಣ್ಣ ನೀಡದೆ, ಜನರ ಮೂಲಭೂತ ಅಗತ್ಯವಾಗಿರುವ ಉತ್ತಮ ರಸ್ತೆ ಮತ್ತು ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ ಎಂದು ಸಂದೀಪ್ ಸಾಲಿಯಾನ್ ಹೇಳಿದ್ದಾರೆ.
ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ವಿವಿಧ ಸಂಘಟನೆಗಳು ಹಾಗೂ ಸ್ಥಳೀಯ ನಿವಾಸಿಗಳನ್ನು ಒಗ್ಗೂಡಿಸಿ ಹೋರಾಟ ನಡೆಸುವುದಾಗಿ ಸ್ಥಳೀಯರು ಹಾಗೂ ವಿವಿಧ ವಾಹನ ಚಾಲಕರ ಸಂಘಟನೆಗಳ ಪ್ರತಿನಿಧಿಗಳು ಎಚ್ಚರಿಕೆ ನೀಡಿದ್ದಾರೆ.

