ಮಂಗಳೂರು: ಮೀನುಗಾರರ ಸಮಸ್ಯೆ ಹಾಗೂ ವ್ಯಾಪಾರ ವಹಿವಾಟು ಪರಿಶೀಲಿಸಲು ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕಾ ಧಕ್ಕೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಭದ್ರತೆಯ ಕಾರಣಕ್ಕೆ ವ್ಯಾಪಾರ ಚಟುವಟಿಕೆ ಸ್ಥಗಿತಗೊಳಿಸಿದ್ದ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮೀನುಗಾರರ ವ್ಯಾಪಾರ ಬಂದ್ ಮಾಡಿಸಲು ಯಾರು ಸೂಚನೆ ನೀಡಿದ್ದಾರೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಮುಖ್ಯಮಂತ್ರಿ, “ನಾನು ಇಲ್ಲಿಗೆ ಅವರ ವ್ಯಾಪಾರ ಮತ್ತು ಸಮಸ್ಯೆಗಳನ್ನು ಆಲಿಸಲು ಬಂದಿದ್ದೇನೆ. ನನ್ನ ಸೆಕ್ಯುರಿಟಿ ಯಾರಿಗೆ ಬೇಕು?” ಎಂದು ಗರಂ ಆದರು.

ಭದ್ರತೆಯ ನೆಪದಲ್ಲಿ ಮೀನುಗಾರರ ವ್ಯಾಪಾರಕ್ಕೆ ಅಡ್ಡಿಪಡಿಸುವ ಅಗತ್ಯವಿಲ್ಲ. ವ್ಯಾಪಾರ ಚಟುವಟಿಕೆಗಳು ಎಂದಿನಂತೆ ನಡೆಯಬೇಕು ಎಂದು ಸೂಚಿಸಿದ ಅವರು, ವ್ಯಾಪಾರ ಬಂದ್ ಮಾಡಿಸಲು ಕಾರಣರಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ತಪ್ಪು ಕಂಡುಬಂದರೆ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಯವರ ಈ ಆಕ್ರೋಶದ ವೇಳೆ ಮಂಗಳೂರು ಡಿಸಿಪಿ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಕುರಿತು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಂದ ವರದಿ ಪಡೆಯುವುದಾಗಿ ತಿಳಿಸಿದರು.

