ತಿರುವನಂತಪುರಂ: ನೆಡುಮಂಗಾಡ್ನಲ್ಲಿ ಒಂದೂವರೆ ವರ್ಷದ ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲತಂದೆ ಮತ್ತು ತಾಯಿ ವಿರುದ್ಧ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಮಗುವನ್ನು ಅತ್ಯಂತ ಕ್ರೂರವಾಗಿ ಥಳಿಸಿ ಕೊಲೆ ಮಾಡಲಾಗಿದ್ದು, ದೇಹದ ಮೇಲೆ 96 ಗಾಯದ ಗುರುತುಗಳಿದ್ದವು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ನೆಡುಮಂಗಾಡ್ ಎಸ್ಸಿ/ಎಸ್ಟಿ ನ್ಯಾಯಾಲಯಕ್ಕೆ 78 ಪುಟಗಳ ಚಾರ್ಜ್ಶೀಟ್ ಸಲ್ಲಿಸಲಾಗಿದೆ.

ಕೊಲೆ, ಸಾಕ್ಷ್ಯ ನಾಶ, ಕ್ರೂರ ಹಲ್ಲೆ ಹಾಗೂ ಜೆಜೆ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.ಮೇ 26ರಂದು ಘಟನೆ ನಡೆದಿತ್ತು. ಅಖಿಲಾ ಅವರ ಪುತ್ರ ಅರ್ಷಿದ್ ಮಲತಂದೆಯ ಕ್ರೂರ ಹಲ್ಲೆಗೆ ಒಳಗಾಗಿ ಮೃತಪಟ್ಟಿದ್ದಾನೆ. ಮಲತಂದೆ ಮಗುವನ್ನು ನಿಯಮಿತವಾಗಿ ಥಳಿಸುತ್ತಿದ್ದಾನೆ ಮತ್ತು ತಾಯಿ ಮಗುವಿನ ಬಗ್ಗೆ ಸರಿಯಾಗಿ ಕಾಳಜಿ ವಹಿಸುತ್ತಿಲ್ಲ ಎಂದು ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣದ ಮೊದಲ ಆರೋಪಿ ಅಷ್ಕರ್ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯ ಕಲಂಗಳನ್ನೂ ದಾಖಲಿಸಲಾಗಿತ್ತು.

ಮಗುವಿನ ದೇಹದ ಮೇಲೆ ಒಟ್ಟು 91 ಗಾಯಗಳಿದ್ದವು ಹಾಗೂ ಏಳು ಪಕ್ಕೆಲುಬುಗಳು ಮುರಿದಿದ್ದವು ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ತಲೆಗೆ ಬಿದ್ದ ಗಂಭೀರ ಗಾಯದಿಂದ ಉಂಟಾದ ಊತ ಮತ್ತು ಆಂತರಿಕ ರಕ್ತಸ್ರಾವವೇ ಮಗುವಿನ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.
ತಮ್ಮಿಬ್ಬರಿಗೂ ಒಟ್ಟಿಗೆ ಜೀವನ ನಡೆಸಲು ಒಂದೂವರೆ ವರ್ಷದ ಮಗು ಅಡ್ಡಿಯಾಗಿತ್ತು. ಈ ಕಾರಣದಿಂದಲೇ ಮಗುವನ್ನು ಕ್ರೂರವಾಗಿ ಥಳಿಸಿದ್ದಾಗಿ ತಾಯಿಯ ಸಂಗಾತಿ ಅಷ್ಕರ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಮಗು ಮೆಟ್ಟಿಲಿನಿಂದ ಬಿದ್ದು ಗಾಯಗೊಂಡಿದೆ ಎಂದು ಆರಂಭದಲ್ಲಿ ತಾಯಿ ಮತ್ತು ಅಷ್ಕರ್ ಪೊಲೀಸರಿಗೆ ತಿಳಿಸಿದ್ದರು. ಆದರೆ ಮಗುವಿನ ಸಾವಿನಲ್ಲಿ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ಮುಂದಿನ ತನಿಖೆಯಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

