ಮಲಯಾಳ ಭಾಷಾ ಬಿಲ್–2025 ವಿರೋಧಕ್ಕೆ ಕಾಸರಗೋಡಿನಲ್ಲಿ ಕನ್ನಡ ಸಂಘಟನೆಗಳ ಆಕ್ರೋಶ

ಕಾಸರಗೋಡು: ಕೇರಳ ಸರ್ಕಾರ ಪ್ರಸ್ತಾಪಿಸಿರುವ ಮಲಯಾಳ ಭಾಷಾ ಬಿಲ್ಸ್–2025 ಕುರಿತು ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಸಂಘಟನೆಗಳು ತೀವ್ರ ಆತಂಕ ವ್ಯಕ್ತಪಡಿಸಿವೆ. ಈ ಮಸೂದೆ ಕನ್ನಡ ಭಾಷಿಕರು ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಹಾನಿಕಾರಕವಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರ ನೇತೃತ್ವದಲ್ಲಿ, ಕೇರಳದ ನೂತನ ಮುಖ್ಯಮಂತ್ರಿಗಳಿಗೆ ಈ ಸಂಬಂಧ ವಿವರವಾದ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಜೊತೆಗೆ, ಕಾಸರಗೋಡು ಜಿಲ್ಲೆಯ ಶಾಸಕರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗವನ್ನು ರಾಜ್ಯ ಸರ್ಕಾರವನ್ನು ಭೇಟಿಯಾಗಲು ಕಳುಹಿಸುವುದಾಗಿ ಘೋಷಿಸಲಾಗಿದೆ.

ಈ ಮಸೂದೆ ಪ್ರಕಾರ, ಹತ್ತನೇ ತರಗತಿಯವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಲಯಾಳ ಭಾಷೆಯನ್ನು ಕಡ್ಡಾಯ ಪ್ರಥಮ ಭಾಷೆಯಾಗಿ ಮಾಡಲಾಗಿದೆ. ಮಲಯಾಳ ಹೊರತುಪಡಿಸಿ ಬೇರೆ ಮಾತೃಭಾಷೆಯ ವಿದ್ಯಾರ್ಥಿಗಳಿಗೆ ತಮ್ಮ ಭಾಷೆಯ ಜೊತೆಗೆ ಮಲಯಾಳ ಕಲಿಯಲು ಅವಕಾಶ ಇದೆ ಎಂದು ಹೇಳಲಾಗಿದ್ದರೂ, ಇದರ ಅನ್ವಯಿಕತೆಯಲ್ಲಿ ಗೊಂದಲ ಉಂಟಾಗಿದೆ.

ಕನ್ನಡ ಸಂಘಟನೆಗಳ ಪ್ರಕಾರ, ಈ ಕ್ರಮದಿಂದ ಕನ್ನಡ ವಿದ್ಯಾರ್ಥಿಗಳಿಗೆ ತಮ್ಮ ತಾಯಿನುಡಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಯುವ ಅವಕಾಶ ಕಡಿಮೆಯಾಗುವ ಆತಂಕವಿದೆ. ಇದು ಭಾರತದ ಸಂವಿಧಾನ ನೀಡಿರುವ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾನೂನು ತಜ್ಞರ ಅಭಿಪ್ರಾಯದಂತೆ, ಸಂವಿಧಾನವು ಭಾಷಾ ಅಲ್ಪಸಂಖ್ಯಾತರಿಗೆ ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಹಕ್ಕು ನೀಡುತ್ತದೆ. ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಒದಗಿಸುವುದು ರಾಜ್ಯಗಳ ಜವಾಬ್ದಾರಿಯಾಗಿದೆ. ಆದ್ದರಿಂದ, ಭಾಷಾ ನೀತಿಗಳು ಪ್ರಾದೇಶಿಕ ಸಂಘರ್ಷಗಳಿಗೆ ಕಾರಣವಾಗದಂತೆ ಜಾಗ್ರತೆಯಿಂದ ರೂಪಿಸಬೇಕು ಎಂದು ಅವರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಮಲಯಾಳ ಭಾಷಾ ಮಸೂದೆಯನ್ನು ಮರು ಪರಿಶೀಲಿಸಲು ಕೇರಳ ಸರ್ಕಾರಕ್ಕೆ ಒತ್ತಾಯ ಹೆಚ್ಚುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!