ಉಪ್ಪಳ, ಏಪ್ರಿಲ್:
ಮಣ್ಣಿನೊಂದಿಗೆ ಮನಸ್ಸು ಸೇರಿಸಿದರೆ ಯಶಸ್ಸು ಖಚಿತ ಎಂಬುದನ್ನು ಪೆರ್ಮುದದ ರೈತ ಸುಬ್ಬಣ್ಣ ನಾಯ್ಕ ಅವರು ತಮ್ಮ 28 ವರ್ಷದ ಕೃಷಿ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕೃಷಿಯನ್ನು ಜೀವನದ ಭಾಗವನ್ನಾಗಿಸಿಕೊಂಡಿರುವ ಅವರು, ವೈವಿಧ್ಯಮಯ ಬೆಳೆಗಳ ಮೂಲಕ ಸ್ಥಳೀಯ ರೈತರಿಗೆ ಮಾದರಿಯಾಗಿದ್ದಾರೆ.
ಒಂದು ಬೆಳೆಗೇ ಸೀಮಿತವಾಗದೆ, ಪೇರಲೆ, ಪಪ್ಪಾಯಿ, ದಾಳಿಂಬೆ ಸೇರಿದಂತೆ ವಿವಿಧ ಹಣ್ಣುಗಳು, ಹರಿವೆ ಸೊಪ್ಪು (ಚೀರ), ಬೆಂಡೆಕಾಯಿ , ಮಲ್ಲಿಗೆ ಸೇರಿದಂತೆ ತರಕಾರಿ ಹಾಗೂ ಸುಗಂಧ ದ್ರವ್ಯಗಳನ್ನು ಬೆಳೆಸುತ್ತಿದ್ದಾರೆ. ಇದರ ಜೊತೆಗೆ ನೆಲ, ಕಂಗು ಮತ್ತು ತೆಂಗು ಸೇರಿದಂತೆ ಪಾರಂಪರಿಕ ಬೆಳೆಗಳನ್ನು ಕೂಡ ಸಮರ್ಥವಾಗಿ ಮುಂದುವರಿಸಿದ್ದಾರೆ.
ವಿಶೇಷವಾಗಿ ಇವರ ತೋಟದಲ್ಲಿ ಬೆಳೆಸುವ ಮಲ್ಲಿಗೆ ಹೂಗಳಿಗೆ ಕರ್ನಾಟಕ ಸೇರಿದಂತೆ ಹೊರರಾಜ್ಯಗಳಲ್ಲಿ ಉತ್ತಮ ಬೇಡಿಕೆ ಇದೆ. ಸೂಕ್ತ ಆರೈಕೆ ಮತ್ತು ಸಮರ್ಪಕ ಮಾರುಕಟ್ಟೆ ತಂತ್ರದಿಂದ ಹೂ ಕೃಷಿ ಉತ್ತಮ ಆದಾಯದ ಮೂಲವಾಗಿದೆ.
“ಮಣ್ಣಿನಲ್ಲಿ ಶ್ರಮಿಸಿದರೆ ಅದು ಯಾವತ್ತೂ ಕೈ ಬಿಡುವುದಿಲ್ಲ” ಎಂಬ ನಂಬಿಕೆಯನ್ನು ವ್ಯಕ್ತಪಡಿಸಿರುವ ಸುಬ್ಬಣ್ಣ ನಾಯ್ಕ, ತಮ್ಮ ಕೃಷಿ ಜೀವನದಲ್ಲಿ ಅಪಾರ ತೃಪ್ತಿಯನ್ನು ಕಂಡಿದ್ದಾರೆ.
ಪಾರಂಪರಿಕ ಕೃಷಿ ಹಾಗೂ ಆಧುನಿಕ ಮಾರುಕಟ್ಟೆ ವ್ಯವಸ್ಥೆಯನ್ನು ಸಮನ್ವಯಗೊಳಿಸಿರುವ ಅವರ ಸಾಧನೆ, ಕೃಷಿಯನ್ನು ಉದ್ಯೋಗವನ್ನಾಗಿ ಆರಿಸಿಕೊಳ್ಳಲು ಬಯಸುವ ಯುವಕರಿಗೆ ಪ್ರೇರಣೆಯಾಗಿದೆ.