ಮಂಜೇಶ್ವರ, ಮೇ 7: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ 29,252 ಮತಗಳ ಭಾರೀ ಅಂತರದಲ್ಲಿ ಗೆಲುವು ಸಾಧಿಸಿರುವ ಎ.ಕೆ.ಎಂ. ಅಶ್ರಫ್ ಅವರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಕಳೆದ ಐದು ವರ್ಷಗಳಿಂದ ಕಾಸರಗೋಡು ಜಿಲ್ಲೆಗೆ ಸಚಿವ ಪ್ರಾತಿನಿಧ್ಯ ಇಲ್ಲದ ಹಿನ್ನೆಲೆಯಲ್ಲಿ, ಈ ಕೊರತೆಯನ್ನು ನೀಗಿಸುವ ಬಗ್ಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯ ಸಮಿತಿ ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
2016-21ರ ಅವಧಿಯಲ್ಲಿ ಇ. ಚಂದ್ರಶೇಖರನ್ ಕಂದಾಯ ಸಚಿವರಾಗಿದ್ದ ಬಳಿಕ ಜಿಲ್ಲೆಗೆ ಸಚಿವ ಸ್ಥಾನ ದೊರಕಿರಲಿಲ್ಲ. ಈ ಹಿಂದೆ ಸಿ.ಟಿ. ಅಹಮ್ಮದಲಿ ಹಾಗೂ ಚೆರ್ಕಳಂ ಅಬ್ದುಲ್ಲಾ ಮುಸ್ಲಿಂ ಲೀಗ್ನಿಂದ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಅಶ್ರಫ್ ಅವರಿಗೆ ಸಚಿವ ಸ್ಥಾನ ದೊರೆತಲ್ಲಿ, ಕಾಸರಗೋಡು ಜಿಲ್ಲೆಯ ಮೂರನೇ ಮುಸ್ಲಿಂ ಲೀಗ್ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಅಶ್ರಫ್ ಅವರ ಭರ್ಜರಿ ಗೆಲುವು ಹಾಗೂ ಜಿಲ್ಲೆಯ ಅಭಿವೃದ್ಧಿ ಹಿತದೃಷ್ಟಿಯಿಂದ ಪಕ್ಷದ ಹೈಕಮಾಂಡ್ ಈ ಕುರಿತು ಸಕಾರಾತ್ಮಕ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.