ಮಂಜೇಶ್ವರ: ಹೊಸಂಗಡಿಯ ಲಾಡ್ಜ್ ಒಂದರಲ್ಲಿ ಯುವತಿ ಮತ್ತು ಆಕೆಯ ಸ್ನೇಹಿತನನ್ನು ಬೆದರಿಸಿ, ನಗ್ನಚಿತ್ರಗಳನ್ನು ತೆಗೆದು ಹಣಕ್ಕಾಗಿ ಬೇಡಿಕೆಯಿಟ್ಟ ಪ್ರಕರಣದ ಮುಖ್ಯ ಸಂಚುಗಾರನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕುಂಜತ್ತೂರು ನಿವಾಸಿ ಪಿ.ಎಂ. ಅಬೂಬಕ್ಕರ್ (40) ಬಂಧಿತ ಆರೋಪಿ. ಮಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ವಿಶೇಷ ತನಿಖಾ ತಂಡವು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದೆ.
ಈ ಪ್ರಕರಣದಲ್ಲಿ ಅಬೂಬಕ್ಕರ್ ಐದನೇ ಆರೋಪಿಯಾಗಿದ್ದಾನೆ.
2026ರ ಜನವರಿಯಲ್ಲಿ ಹೊಸಂಗಡಿ ಪೇಟೆಯ ಲಾಡ್ಜ್ ಒಂದರ ರೂಮ್ ನಂಬರ್ 206ರಲ್ಲಿ ಈ ಘಟನೆ ನಡೆದಿತ್ತು.
ರೂಮಿನಲ್ಲಿದ್ದ ಯುವತಿ ಮತ್ತು ಆಕೆಯ ಸ್ನೇಹಿತನ ಬಳಿಗೆ ಐವರು ಆರೋಪಿಗಳ ತಂಡ ಅಕ್ರಮವಾಗಿ ನುಗ್ಗಿ ಬೆದರಿಕೆ ಹಾಕಿದ್ದರು. ಇಬ್ಬರನ್ನೂ ಬಲವಂತವಾಗಿ ನಗ್ನಗೊಳಿಸಿ ಮೊಬೈಲ್ನಲ್ಲಿ ದೃಶ್ಯಗಳನ್ನು ಚಿತ್ರೀಕರಿಸಿದ್ದರು.
ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ 2 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ್ದರು. ಅಂದು ಅವರ ಬಳಿಯಿದ್ದ 5000 ರೂಪಾಯಿ ನಗದು ಮತ್ತು ಮೊಬೈಲ್ ಫೋನ್ ಅನ್ನು ಆರೋಪಿಗಳು ಕಿತ್ತುಕೊಂಡಿದ್ದರು.
ಪ್ರಕರಣದ ಇತರ ನಾಲ್ವರು ಆರೋಪಿಗಳನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು. ಆದರೆ ಅಬೂಬಕ್ಕರ್ ತಲೆಮರೆಸಿಕೊಂಡಿದ್ದರಿಂದ ಆತನಿಗಾಗಿ ಹುಡುಕಾಟ ತೀವ್ರಗೊಳಿಸಲಾಗಿತ್ತು.
ಮಂಜೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಜಿಜಿಶ್ ಅವರ ನೇತೃತ್ವದಲ್ಲಿ, ಎಸ್.ಐ. ವೈಷ್ಣವ್, ಎ.ಎಸ್.ಐ. ಫಿಲಿಪ್ ಥಾಮಸ್ ಮತ್ತು ಸಂದೀಪ್ ಅವರನ್ನೊಳಗೊಂಡ ತಂಡವು ಮಂಗಳೂರಿನಲ್ಲಿ ಈತನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.