ಕಾಸರಗೋಡು, ಜು. 7: ಕಾಸರಗೋಡು ಜಿಲ್ಲೆಯ ಕಿನಾನೂರು-ಕರಿಂತಳ ಪಂಚಾಯತ್ ವ್ಯಾಪ್ತಿಯ ನಾಂತಿಯಡ್ಕದಲ್ಲಿ ಸೋಮವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಬೀಸಿದ ಭೀಕರ ಗಾಳಿ-ಮಳೆಯ ಪರಿಣಾಮ ಬೃಹತ್ ಮರವೊಂದು ಮನೆ ಮೇಲೆ ಉರುಳಿಬಿದ್ದು 90 ವರ್ಷದ ವೃದ್ಧೆಯೊಬ್ಬರು ಗಾಯಗೊಂಡ ಘಟನೆ ನಡೆದಿದೆ.
ನಾಂತಿಯಡ್ಕದ ಕೆ. ಜಾನಕಿ ಅವರಿಗೆ ಸೇರಿದ ಹೆಂಚಿನ ಮನೆ ಮೇಲೆ ಬೃಹತ್ ಮರ ಅಪ್ಪಳಿಸಿದ ಪರಿಣಾಮ ಮನೆಯ ಮೇಲ್ಛಾವಣಿಯ ಹೆಂಚುಗಳು ಕುಸಿದು ಬಿದ್ದವು. ಈ ವೇಳೆ ಮನೆಯೊಳಗಿದ್ದ ಜಾನಕಿ ಅವರ ತಾಯಿ ಕೆ. ಮಾಣಿ (90) ಅವರ ಮೇಲೆ ಹೆಂಚುಗಳು ಬಿದ್ದ ಪರಿಣಾಮ ಅವರು ಗಾಯಗೊಂಡರು. ಗಾಯಾಳುವಿಗೆ ಸ್ಥಳೀಯರ ಸಹಾಯದಿಂದ ತಕ್ಷಣ ಚಿಕಿತ್ಸೆ ಒದಗಿಸಲಾಗಿದೆ.
ಘಟನೆಯ ಸಂದರ್ಭದಲ್ಲಿ ಮನೆಯಲ್ಲಿದ್ದ ಇತರರು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.



ಭಾರಿ ಗಾಳಿಯ ರಭಸಕ್ಕೆ ರಬ್ಬರ್ ಮರಗಳು ಸೇರಿದಂತೆ ಹಲವು ಮರಗಳು ಧರೆಗುರುಳಿದ್ದು, ನಾಂತಿಯಡ್ಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪಾರ ಹಾನಿ ಸಂಭವಿಸಿದೆ.
ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಬಳಿಕ ಕಿನಾನೂರು-ಕರಿಂತಳ ಪಂಚಾಯತ್ ಅಧ್ಯಕ್ಷ ಎಂ. ರಾಜನ್ ಹಾಗೂ ಪರಪ್ಪ ಬ್ಲಾಕ್ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಪಾರಕ್ಕೋಲ್ ರಾಜನ್ ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು.
ಗಾಳಿ-ಮಳೆಯಿಂದ ಪ್ರದೇಶದಲ್ಲಿ ಸಾಕಷ್ಟು ಮರಗಳು ಮುರಿದು ಬಿದ್ದಿದ್ದು, ಸಾರ್ವಜನಿಕ ಆಸ್ತಿ ಹಾಗೂ ಖಾಸಗಿ ಮನೆಗಳಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.


