ಮಧೂರು ಮೇಲಿನ ಮನೆ ನಿವಾಸಿಯಾಗಿದ್ದ ವೇಣುಗೋಪಾಲ ಕಲ್ಲೂರಾಯ ಅವರು ಗುರುವಾರ ರಾತ್ರಿ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದರು. ಇಂದು ಬೆಳಿಗ್ಗೆ ಅವರ ಅಂತ್ಯಸಂಸ್ಕಾರ ನೆರವೇರಿತು.
ಶ್ರೀ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಪಾರಂಪರ್ಯ ಅರ್ಚಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು, ಭಕ್ತರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು.

ಅವರು ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ವಲಯ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿ ಸಮುದಾಯ ಸಂಘಟನೆಗೆ ಮಹತ್ವದ ಕೊಡುಗೆ ನೀಡಿದ್ದರು.
ನಿವೃತ್ತ ಶಿಕ್ಷಕರಾಗಿದ್ದ ವೇಣುಗೋಪಾಲ ಕಲ್ಲೂರಾಯ ಅವರು ಹವ್ಯಾಸಿ ಯಕ್ಷಗಾನ ಕಲಾವಿದರೂ, ಸಂಗೀತ ವಿದ್ವಾಂಸರೂ ಆಗಿದ್ದು, ಪೌರೋಹಿತ್ಯ ಕ್ಷೇತ್ರದಲ್ಲಿಯೂ ವಿಶಿಷ್ಟ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಕಮಲಾಕ್ಷಿ, ಪುತ್ರರಾದ ವಸಂತ ಕಲ್ಲೂರಾಯ, ಕಿಶೋರ ಅಲಿಯಾಸ್ ಹರಿ ಕೇಶವ ಕಲ್ಲೂರಾಯ, ಸೊಸೆ ಕಾವ್ಯಶ್ರೀ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಭಕ್ತರು, ಗಣ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.


