ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಕ್ವಾರ್ಟರ್ಸ್ನೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತಪಟ್ಟಿದ್ದಾನೆ.ಮೃತ ವಿದ್ಯಾರ್ಥಿಯನ್ನು ಬೆದ್ರಂಪಳ್ಳದಲ್ಲಿ ವಾಸಿಸುತ್ತಿದ್ದ ಪ್ರಕಾಶನ್ ಮತ್ತು ಸುನಿತಾ ದಂಪತಿಯ ಪುತ್ರ 12 ವರ್ಷದ ಶ್ರೀಹರಿ ಎಂದು ಗುರುತಿಸಲಾಗಿದೆ.ಪ್ರಕಾಶನ್ ಹಾಗೂ ಕುಟುಂಬ ಮೂಲತಃ ಪತ್ತನಂತಿಟ್ಟ ಜಿಲ್ಲೆಯ ಅಡೂರು ನಿವಾಸಿಗಳಾಗಿದ್ದು, ಬೆದ್ರಂಪಳ್ಳದ ಅಬ್ದುಲ್ಲ ಕುಂಣಿ ಅವರ ರಬ್ಬರ್ ತೋಟದಲ್ಲಿ ಪ್ರಕಾಶನ್ ಮತ್ತು ಅವರ ಪತ್ನಿ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು.

ಶ್ರೀಹರಿಗೆ ಹೊರತಾಗಿ ಪ್ರೀತು ಮತ್ತು ನಿಹಾರಿಕ ಎಂಬ ಇಬ್ಬರು ಮಕ್ಕಳು ಈ ದಂಪತಿಗಿದ್ದಾರೆ.ಘಟನೆ ನಡೆದ ದಿನ ಮಧ್ಯಾಹ್ನ, ತಂದೆ-ತಾಯಿ ಅಗತ್ಯ ವಸ್ತುಗಳನ್ನು ಖರೀದಿಸಲು ಅಂಗಡಿಗೆ ತೆರಳಿದ್ದರು. ಈ ವೇಳೆ ಮೂವರು ಮಕ್ಕಳು ಕ್ವಾರ್ಟರ್ಸ್ನೊಳಗೆ ಆಟವಾಡುತ್ತಿದ್ದರು.ಪೋಷಕರು ಮರಳಿ ಬಂದಾಗ ಬಾಗಿಲು ಒಳಗಿನಿಂದ ಮುಚ್ಚಲಾಗಿತ್ತು. ಹಲವು ಬಾರಿ ಬಾಗಿಲು ಬಡಿದರೂ ತೆರೆಯದ ಹಿನ್ನೆಲೆಯಲ್ಲಿ ಬಾಗಿಲು ಮುರಿದು ಒಳಗೆ ಪ್ರವೇಶಿಸಿದಾಗ ಶ್ರೀಹರಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅದಾಗಲೇ ಮೃತಪಟ್ಟಿದ್ದನು ಎಂದು ತಿಳಿದುಬಂದಿದೆ.ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿಯ ಅಕಾಲಿಕ ಸಾವಿನಿಂದ ಕುಟುಂಬ ಹಾಗೂ ಸ್ಥಳೀಯರಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದೆ.


