ಕಾಸರಗೋಡು: ದೈವಸ್ಥಾನಗಳ ಪವಿತ್ರತೆಯನ್ನು ಹರಾಜುಹಾಕಲು ಯತ್ನಿಸಿದ ಕಳ್ಳ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ.

ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಹೊರಭಾಗದಲ್ಲಿ ಇರಿಸಲಾಗಿದ್ದ ಎರಡು ಕಾಣಿಕೆ ಹುಂಡಿಗಳನ್ನು ಎಗರಿಸಿದ್ದ ಕುಖ್ಯಾತ ಕಳ್ಳನನ್ನು ಬದಿಯಡ್ಕ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದೂರು ಪಯಂಗಡಿ ನಿವಾಸಿ ಸಾಬಿತ್ ಎ.ಪಿ. (33) ಬಂಧಿತ ಆರೋಪಿ.

ಕಳೆದ ಜುಲೈ 29ರ ರಾತ್ರಿ ಈ ಕೃತ್ಯ ನಡೆದಿತ್ತು. ಗುಳಿಗ ದೈವದ ಹುಂಡಿಯಲ್ಲಿದ್ದ 2 ಸಾವಿರ ಹಾಗೂ ಮತ್ತೊಂದು ಹುಂಡಿಯಲ್ಲಿದ್ದ 2 ಸಾವಿರ ರೂ. ಸೇರಿ ಒಟ್ಟು ನಗದು ದೋಚಲಾಗಿತ್ತು.
ಉಬ್ರಂಗಳ ನಿವಾಸಿ ರಮೇಶ್ ನೀಡಿದ ದೂರಿನ ಮೇರೆಗೆ, ಪೊಲೀಸ್ ಇನ್ಸ್ಪೆಕ್ಟರ್ ಅನೂಪ್ಕೃಷ್ಣ ನೇತೃತ್ವದ ತನಿಖಾ ತಂಡವು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆಹಿಡಿದಿದೆ.
ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ಕಳವು ನಡೆಸುತ್ತಿದ್ದ ಈತನ ಬಂಧನದಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

