ಕಾಸರಗೋಡು :ಕರ್ನಾಟಕದ ಗಡಿಭಾಗದಲ್ಲಿ ಸಂಭವಿಸಿದ ಮೇಘಸ್ಫೋಟದ ಪರಿಣಾಮವಾಗಿ ಕಾಸರಗೋಡು ಜಿಲ್ಲೆಯಲ್ಲಿ ಮಳೆಯು ತೀವ್ರಗೊಂಡಿದ್ದು, ಪ್ರಕೃತಿ ರೌದ್ರಾವತಾರ ತಾಳಿದೆ.

ಜಿಲ್ಲೆಯ ಜೀವನಾಡಿಯಾದ ಉಪ್ಪಳ ಹೊಳೆಯ ನೀರಿನ ಹರಿವು ಅಪಾಯದ ಮಟ್ಟವನ್ನು ಮೀರಿ ಉಕ್ಕಿ ಹರಿಯುತ್ತಿದ್ದು, ಜನತೆಯಲ್ಲಿ ಆತಂಕ ಮೂಡಿಸಿದೆ.
ಉಪ್ಪಳ ಹೊಳೆಯಷ್ಟೇ ಅಲ್ಲದೆ, ಮಧೂರು, ಪುತ್ತಿಗೆ ಮತ್ತು ಮಂಜೇಶ್ವರ ಹೊಳೆಗಳಲ್ಲೂ ನೀರಿನ ಹರಿವು ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ಅಪರಾಹ್ನದಿಂದಲೇ ರೆಡ್ ಅಲರ್ಟ್ ಘೋಷಿಸಲಾಗಿದೆ.

ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯ ಪ್ರಕಾರ ಬುಧವಾರ ಬೆಳಿಗ್ಗೆ 8:30ರ ವರೆಗೆ ಕೇರಳದ ಒಟ್ಟು 11 ಜಿಲ್ಲೆಗಳಲ್ಲಿ ಕಾಸರಗೋಡು ಸಹಿತ ಭೀಕರ ಮಳೆ ಹಾಗೂ ಮಿಂಚಿನ ಜಲಪ್ರಳಯ ಸಂಭವಿಸುವ ಸಾಧ್ಯತೆಯಿದೆ.
ನದಿ ತೀರದ ನಿವಾಸಿಗಳು ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ಆಡಳಿತ ಮಂಡಳಿಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತುರ್ತು ಸಂದೇಶ ಹೊರಡಿಸಲಾಗಿದೆ.


