ಕಾಸರಗೋಡು: ಮನೆ ಬಾಡಿಗೆಗೆ ಪಡೆಯುವ ಸೋಗಿನಲ್ಲಿ ವೃದ್ಧ ದಂಪತಿಯ ಕಣ್ಣಿಗೆ ಮೆಣಸಿನ ಹುಡಿ ಎರಚಿ ಹಲ್ಲೆ ನಡೆಸಿ, 12 ಪವನ್ ಚಿನ್ನಾಭರಣ ದರೋಡೆ ಮಾಡಿದ್ದ ಕುಖ್ಯಾತ ಆರೋಪಿಯನ್ನು ಆಲಪ್ಪುಳ ಸೌತ್ ಪೊಲೀಸರು ಬಂಧಿಸಿದ್ದಾರೆ.

ಕಾಞಂಗಾಡ್ನ ರಾಜ್ಮೋಹನ್ (42) ಬಂಧಿತ ಆರೋಪಿಯಾಗಿದ್ದು, ನ್ಯಾಯಾಲಯ ಈತನಿಗೆ ರಿಮಾಂಡ್ ವಿಧಿಸಿದೆ.
ಸೋಮವಾರ ಮಧ್ಯಾಹ್ನ ಕಣಿಯಾಕುಳಂ ಜಂಕ್ಷನ್ ಸಮೀಪದ ನಿವಾಸಿಗಳಾದ ಕಯರ್ಫೆಡ್ನ ಮಾಜಿ ಮ್ಯಾನೇಜರ್ ಕೆ.ಆರ್. ಸುದರ್ಶನ್ (70) ಮತ್ತು ಪತ್ನಿ ರತ್ನಕುಮಾರಿ (65) ಅವರ ಮನೆಗೆ ಆರೋಪಿ ನುಗ್ಗಿದ್ದಾನೆ. ರತ್ನಕುಮಾರಿ ಧರಿಸಿದ್ದ ಕರಿಮಣಿ ಸರ, ಕಪಾಟಿನಲ್ಲಿದ್ದ 63.5 ಗ್ರಾಂ ಚಿನ್ನ ಹಾಗೂ 5,000 ರೂ. ದೋಚಿದ್ದಾನೆ.

ತಪ್ಪಿಸಿಕೊಳ್ಳುವಾಗ ದಂಪತಿಯ ಬಟ್ಟೆ ಬದಲಾಯಿಸಿ ಪರಾರಿಯಾಗಿದ್ದ ಈತನನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ. ಆರೋಪಿಯ ವಿರುದ್ಧ ಈಗಾಗಲೇ ಇತರೆ ಪ್ರಕರಣಗಳಿದ್ದು, ಇತ್ತೀಚೆಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


