ಕಾಸರಗೋಡು : ಇಲ್ಲಿಯ ಕಲ್ಲಕಟ್ಟ ಬಳಿ ಕಾರು ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಟೋದಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಚೆಂಗಳ ಬಾರಿಕ್ಕಾಡಿನ ಆಟೋ ಚಾಲಕ ಪಿ.ಬಿ. ದಾಮೋದರನ್ (63) ರಕ್ಷಣೆಗೊಳಗಾದವರು. ಪ್ರಯಾಣಿಕರಾದ ಕಲ್ಲಕಟ್ಟ ನಿವಾಸಿ ರಾಜೇಶ್ವರಿ (48) ಮತ್ತು ಅವರ ಎಂಡೋಸಲ್ಫಾನ್ ಸಂತ್ರಸ್ತೆ ಪುತ್ರಿ ಅಂಜಲಿ (23) ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಣಂಗೂರಿನಿಂದ ಮನೆಗೆ ಮರಳುತ್ತಿದ್ದಾಗ ಎದುರಿನಿಂದ ಬಂದ ಕಾರು ರಿಕ್ಷಾಗೆ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಆಟೋ ನಜ್ಜುಗುಜ್ಜಾಗಿ ಚಾಲಕ ಒಳಗೆ ಸಿಲುಕಿಕೊಂಡಿದ್ದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಕಾಸರಗೋಡು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿ ಸುಕು ವರ್ಗೀಸ್ ನೇತೃತ್ವದ ತಂಡ, ದಾಮೋದರನ್ರನ್ನು ಸುರಕ್ಷಿತವಾಗಿ ಹೊರತೆಗೆದು ಆಸ್ಪತ್ರೆಗೆ ಸೇರಿಸಿದೆ.


