ಮಂಜೇಶ್ವರ: ಮಂಜೇಶ್ವರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಬಟ್ಟೆಪದವಿನಲ್ಲಿ ಅಂಗಡಿಗೆ ನುಗ್ಗಿ ಯುವ ವ್ಯಾಪಾರಿಯನ್ನು ಬಲವಂತವಾಗಿ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ಮಂಜೇಶ್ವರದ ಕುಳೂರು ಕನ್ನಿಲ್ ಹೌಸ್ ನಿವಾಸಿ ಮೊಹಮ್ಮದ್ ಸಫ್ವಾನ್ ಅಲಿಯಾಸ್ ‘ವೆಡಿ ಸಫ್ವಾನ್’ (28) ಬಂಧಿತ ಆರೋಪಿ. ಬಟ್ಟಿ ಪದವು ನಿವಾಸಿ ಶುವೈಬ್ ಮೊಯಿನ್ ಶೇಖ್ (28) ಮೇಲೆ ಈ ಮಾರಣಾಂತಿಕ ಹಲ್ಲೆ ಹಾಗೂ ವಧೆ ಯತ್ನ ನಡೆದಿತ್ತು.

ಸೋಮವಾರ ಮಧ್ಯಾಹ್ನ ಕಾರಿನಲ್ಲಿ ಬಂದ ತಂಡವು ಶುವೈಬ್ ಅವರನ್ನು ಬೆದರಿಸಿ, ಮುಖಕ್ಕೆ ಹೊಡೆದು ಬಳಿಕ ಆಕಾಶಕ್ಕೆ ಗುಂಡು ಹಾರಿಸಿ ನಂತರ ಅವರ ಮೇಲೆಯೇ ಗುಂಡಿನ ದಾಳಿ ನಡೆಸಿತ್ತು.
ಅದೃಷ್ಟವಶಾತ್ ಶುವೈಬ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಖಾದರ್ ಮದಂಕಲ್ಲು, ಮಿಯಾಪದವು ರಹೀಮ್, ಅಬೂಬಕರ್ ಸಿದ್ದೀಕ್ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

