ಮಂಗಳೂರಿನ ವಿ.ಟಿ.ರಸ್ತೆಯಲ್ಲಿರುವ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದಲ್ಲಿ ಅಧಿಕಮಾಸದ ಪರಮ ಏಕಾದಶಿಯಂದು ಅಮೇರಿಕಾದ ಬೋಸ್ಟನ್ ನಿವಾಸಿ ದಿಯಾ ಶೆಣೈಯವರು ದೇವರ ಸನ್ನಿಧಿಯಲ್ಲಿ ಭರತನಾಟ್ಯ ಸೇವೆಯನ್ನು ಸಮರ್ಪಿಸಿದರು.
ಭಕ್ತಾದಿಯಾಗಿ ಹೆತ್ತವರೊಡನೆ ದೇವಳಕ್ಕೆ ಭೇಟಿ ನೀಡಿದ ದಿಯಾ ಭಕ್ತಿಭಾವಪರವಶರಾಗಿ ತಮ್ಮ ಸೇವಾ ಬಯಕೆಯನ್ನು ಈಡೇರಿಸಲು ಆಡಳಿತ ಮಂಡಳಿಯ ಬಳಿ ವಿನಂತಿಸಿದರು. ಬಳಿಕ ಭರತನಾಟ್ಯದ ವಸ್ತ್ರ ಧರಿಸಿ ತಮ್ಮ ಮನದಿಚ್ಚೆಯನ್ನು ಈಡೇರಿಸಿಕೊಂಡರು. ಅಮೇರಿಕಾದಲ್ಲಿದ್ದರೂ ಭಾರತದ ನೃತ್ಯ ಪ್ರಾಕಾರವನ್ನು ಅಭ್ಯಸಿಸಿ ಬರುತ್ತಿರುವ ದಿಯಾ ಅವರ ಭರತನಾಟ್ಯವನ್ನು ಭಕ್ತಾದಿಗಳು ಕಣ್ತುಂಬಿಕೊಂಡರು.
ದೇವಳದಲ್ಲಿ ಇಡೀ ದಿನ ಭಜನಾ ಸಂಕೀರ್ತನಾ ಕಾರ್ಯಕ್ರಮಗಳು ನಡೆದವು. ದೇವಸ್ಥಾನವನ್ನು ಭಕ್ತರು ಸೇವಾರ್ಥವಾಗಿ ನೀಡಿದ ವಿವಿಧ ತರಕಾರಿಗಳು, ಹಣ್ಣು ಹಂಪಲು, ಪುಷ್ಪಗಳಿಂದ ಸಿಂಗರಿಸಲಾಗಿತ್ತು ಮತ್ತು ಅದನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗಿತ್ತು. ಶ್ರೀ ವಿಠೋಭ ರುಕುಮಾಯಿ ದೇವರಿಗೆ ವಿವಿಧ ಅಭಿಷೇಕ, ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿವಿಧ ಸೇವೆಗಳನ್ನು ಸಲ್ಲಿಸಿ ಕೃತಾರ್ಥರಾದರು. ಅಧಿಕ ಮಾಸದ ಏಕಾದಶಿಯಂದು ಶ್ರೀ ವಿಠೋಭ ರುಕುಮಾಯಿ ದೇವರಿಗೆ ಸೇವೆ ಸಲ್ಲಿಸಿದರೆ ಫಲ ಅಧಿಕವಾಗಿರುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ.