ಮಂಗಳೂರು ತಾಲೂಕು ಪಂಚಾಯತ್ ತ್ರೈಮಾಸಿಕ ಕೆಡಿಸಿ ಸಭೆ

ಮಂಗಳೂರು : ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ ಮತ್ತು ಮಲೇರಿಯಾದ ನಿಯಂತ್ರಣಕ್ಕಾಗಿ ಸೊಳ್ಳೆ ಉತ್ಪತ್ತಿಯ ವಾಸದ ಮನೆಗಳಿಗೂ ರಾಜ್ಯ ಆರೋಗ್ಯ ಇಲಾಖೆಯು ದಂಡ ಪ್ರಯೋಗಕ್ಕೆ ಸುತ್ತೋಲೆ ಹೊರಡಿಸಿದೆ. ಜಿಲ್ಲಾಧಿಕಾರಿ ನೇತೃತ್ವದ ಸಭೆಯ ಬಳಿಕ ಈ ಬಗ್ಗೆ ನಿರ್ಧಾರವಾಗಲಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಜಯ್ ಭಂಡಾರಿ ತಿಳಿಸಿದ್ದಾರೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಮಂಗಳೂರು ತಾಪಂನ ಸಭಾಂಗಣದಲ್ಲಿ ಪ್ರಥಮ ತ್ರೈಮಾಸಿಕ ಸಭೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಡೆಂಗ್ಯೂ ಹಾಗೂ ಮಲೇರಿಯಾ ಪ್ರಕರಣಗಳ ಬಗ್ಗೆ ಮಾಹಿತಿ ಒದಗಿಸಿದ ಸಂದರ್ಭ ಈ ವಿಷಯ ತಿಳಿಸಿದರು.

ತಾ.ಪಂ.ನ ನಗರ ಹಾಗೂ ಗ್ರಾಮಾಂತರ ಭಾಗ ಸೇರಿ ಈ ವರ್ಷ ಈವರೆಗೆ 620 ಶಂಕಿತ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, 66 ದೃಢಪಟ್ಟಿವೆ. ಲೇಡಿಹಿಲ್, ಬಂದರು, ಕುಳಾಯಿ ಹಾಗೂ ಬೈಕಂಪಾಡಿ ಕೈಗಾರಿಕಾ ವಲಯ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ 25 ಮಂದಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು 100 ದಿನ ಲಾರ್ವಾ ಸಮೀಕ್ಷೆ ನಡೆಸಿದ್ದರು. ಈ ಬಾರಿಯೂ 25 ಮಂದಿ ಮಕ್ಕಳು ಮುಂದೆ ಬಂದಿದ್ದು, ಗೌರವಧನದ ಆಧಾರದಲ್ಲಿ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ಜನರ ನಿರ್ಲಕ್ಷ್ಯ ತುಂಬಾ ಕಂಡು ಬರುತ್ತಿದ್ದು, ಶೇ. 40ರಷ್ಟು ವಲಸೆ ಕಾರ್ಮಿಕರ ಮೂಲಕವೇ ಈ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಈವರೆಗೆ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸೊಳ್ಳೆ ಉತ್ಪತ್ತಿ ಕಂಡುಬಂದಾಗ ದಂಡ ಹಾಕಲಾಗುತ್ತಿತ್ತು.

ಇದೀಗ ಆರೋಗ್ಯ ಇಲಾಖೆಯು ಸೊಳ್ಳೆ ಉತ್ಪತ್ತಿಯಾಗುವ ಮನೆಗಳಿಗೆ ಸೇರಿದಂತೆ ದಂಡ ವಿಧಿಸಲು ಸುತ್ತೋಲೆ ಹೊರಡಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮಟ್ಟದ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಸೊಳ್ಳೆ ವ್ಯಕ್ತಿ ತಾಣಗಳ ಬಗ್ಗೆ ಪ್ರಥಮ ಹಂತದಲ್ಲಿ ನೋಟೀಸು ನೀಡಿ ಬಳಿಕವೂ ಕ್ರಮ ಆಗದಿದ್ದರೆ, ದಂಡ ವಿಧಿಸಲಾಗು ವುದು, ಸುತ್ತೋಲೆ ಪ್ರಕಾರ ವಸತಿ ಮನೆಗಳಿಗೆ 400 ರೂ., ಗ್ರಾಮಾಂತರ 200 ರೂ., ವಾಣಿಜ್ಯ ದಲ್ಲಿ ತಾಣಗಳಿಗೆ ನಗರ 1000 ರೂ., ಗ್ರಾಮಾಂತರ 500 ರೂ., ನಗರದಲ್ಲಿ 2000 ರೂ. ಹಾಗೂ ಗ್ರಾಮಾಂತರದಲ್ಲಿ 1000 ರೂ. ದಂಡ ವಿಧಿಸಲು ನಿಯಮ ರೂಪಿಸಲಾಗಿದೆ ಎಂದು ಡಾ. ಸುಜಯ ಭಂಡಾರಿ ವಿವರ ನೀಡಿದರು.

ಕೇವಲ ದಂಡ ಹಾಕಿ ಏನೂ ಪ್ರಯೋಜನವಾಗದು. ಸೊಳ್ಳೆ ಉತ್ಪತ್ತಿಯಾಗುವ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಎಚ್ಚರಿಕೆ ನೀಡಿ ಕ್ರಮ ವಹಿಸುವಂತಹ ಪ್ರಕ್ರಿಯೆಗಳು ಜಾರಿಯಾಗಬೇಕು. ಇಲ್ಲವಾದರೆ ತೆರಿಗೆ ಜತೆ ವರ್ಷಕ್ಕೆ ಒಂದು ಬಾರಿ ದಂಡ ಹಾಕಿ ಸುಮ್ಮನಿರುತ್ತಾರೆ. ಇದು ಜನರ ಆರೋಗ್ಯದ ಪ್ರಶ್ನೆ. ಗಂಭೀರವಾಗಿ ಈ ಬಗ್ಗೆ ಕ್ರಮ ಆಗಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!