ಸುರತ್ಕಲ್:* ಸುರತ್ಕಲ್ ಸಮೀಪದ ಮಾದವ ನಗರದ ವೆಟ್ವೆಲ್ ಒಳಗಿರುವ ಎಸ್ಟಿಸಿ ಆವರಣದಲ್ಲಿ ಪೂರ್ವಾನುಮತಿ ಪಡೆಯದೆ ಮರಗಳನ್ನು ಕಡಿದು ಸಾಗಿಸಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ವಕ್ತಾರ ಎಂ.ಜಿ. ಹೆಗಡೆ ಆಗ್ರಹಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಬಂಧಪಟ್ಟ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ಯಾವುದೇ ಮಾಹಿತಿ ನೀಡದೆ ಮತ್ತು ಅರಣ್ಯ ಕಾಯ್ದೆಯಡಿ ಅಗತ್ಯ ಅನುಮತಿ ಪಡೆಯದೆ ವಿವಿಧ ಜಾತಿಯ ಮರಗಳನ್ನು ಕಡಿದು ಸಾಗಿಸಲಾಗಿದೆ ಎಂದು ಆರೋಪಿಸಿದರು.

ಮರಗಳನ್ನು ಲಾರಿಗೆ ತುಂಬುವ ಸಂದರ್ಭದಲ್ಲಿ ಸ್ಥಳೀಯ ಮಾಜಿ ಕಾರ್ಪೊರೇಟರ್ ಹಾಗೂ ರಾಜ್ಯ ಬಿಜೆಪಿ ಮಹಿಳಾ ಪ್ರಧಾನ ಕಾರ್ಯದರ್ಶಿ *ಶ್ವೇತಾ ಪೂಜಾರಿ, ಗುತ್ತಿಗೆದಾರರಾದ **ಪುರುಷೋತ್ತಮ, ಮಂಗಳೂರು ಉತ್ತರ ಬ್ಲಾಕ್ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ *ಪುಷ್ಪರಾಜ್ ಹಾಗೂ ಮಹಾನಗರ ಪಾಲಿಕೆಯ ವೆಟ್ವೆಲ್ ಜೂನಿಯರ್ ಎಂಜಿನಿಯರ್ ಯತೀಶ್ ಅವರು ಸ್ಥಳದಲ್ಲಿರುವ ಫೋಟೋಗಳು ಲಭ್ಯವಾಗಿವೆ ಎಂದು ಹೆಗಡೆ ತಿಳಿಸಿದರು.
ಈ ಕುರಿತು ಸುರತ್ಕಲ್ ಮಹಾನಗರ ಪಾಲಿಕೆ ಉಪಕಚೇರಿ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಕಡಿದ ಮರಗಳನ್ನು ಬೇರೆಡೆಗೆ ಸಾಗಿಸಿರುವುದು ತಿಳಿದುಬಂದಿದೆ. ಪ್ರಕರಣದ ಕುರಿತು ಪೊಲೀಸ್ ಆಯುಕ್ತರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಕುಂತಳಾ ಕಾಮತ್ ಹಾಗೂ ಸಾರೀಕ ಪೂಜಾರಿ ಉಪಸ್ಥಿತರಿದ್ದರು.

