ಮಂಗಳೂರು:ಮಳೆಗಾಲದ ನೆನಪುಗಳನ್ನು ಸಂಗೀತದ ಮೂಲಕ ಮರುಕಳಿಸುವ ಉದ್ದೇಶದಿಂದ ಕುಂಬ್ಳೆ ಬ್ರದರ್ಸ್ ಹಾಗೂ ಲಯನ್ಸ್ ಕ್ಲಬ್ ಆಫ್ ಮಂಗಳೂರು ಸಹಯೋಗದಲ್ಲಿ ‘ಸುಹಾನ ಸಫರ್’ ಹಾಗು “ರಿಮ್ಝಿಮ್ ಗಿರೆ ಸಾವನ್ ” ಸಂಗೀತ ಕಾರ್ಯಕ್ರಮವನ್ನು ಜುಲೈ 26 ರ ಭಾನುವಾರ ಸಂಜೆ 5 ಗಂಟೆಯಿಂದ ನಗರದ ಸುಜೀರ್ ಸಿ.ವಿ. ನಾಯಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಮಂಗಳೂರು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಲಯನ್ ಕುಂಬ್ಳೆ ನರಸಿಂಹ ಪ್ರಭು ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಗಾಲದ ಸೊಬಗನ್ನು ಬಿಂಬಿಸುವ ಜನಪ್ರಿಯ ಹಿಂದಿ ಹಾಗೂ ಕನ್ನಡ ಚಲನಚಿತ್ರಗಳ ಸುಮಧುರ ಗೀತೆಗಳನ್ನು ಒಳಗೊಂಡ ವಿಶಿಷ್ಟ ಸಂಗೀತ ಕಾರ್ಯಕ್ರಮ ಇದಾಗಿದ್ದು, ಎಲ್ಲ ವಯೋಮಾನದ ಸಂಗೀತಾಸಕ್ತರಿಗೆ ಮನರಂಜನೆಯ ಜೊತೆಗೆ ಹಳೆಯ ನೆನಪುಗಳನ್ನು ಮರುಕಳಿಸುವ ಅನುಭವ ನೀಡಲಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟಿಸಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಹಳೆಯ ಚಲನಚಿತ್ರಗಳ ಮಧುರ ಗೀತೆಗಳ ಮೂಲಕ ಹಿರಿಯ ನಾಗರಿಕರು ಹಾಗೂ ಸಂಗೀತಾಭಿಮಾನಿಗಳಿಗೆ ಸಂತೋಷ ಮತ್ತು ಮಾನಸಿಕ ನೆಮ್ಮದಿ ನೀಡುವುದು ‘ಕುಂಬ್ಳೆ ಬ್ರದರ್ಸ್’ ತಂಡದ ಪ್ರಮುಖ ಉದ್ದೇಶವಾಗಿದೆ.


