ನೀಟ್ ಅಕ್ರಮದ ತನಿಖೆಗೆ ಫಾಸ್ಟ್ಟ್ರ್ಯಾಕ್ ಕೋರ್ಟ್ ರಚನೆ ಹಾಗೂ ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆ ಕೊಡಿಸುವ ಭರವಸೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಯುವ ಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುವ ಯಾರನ್ನೂ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಹೇಳಿದರು.

ನೀಟ್ ಹಗರಣ ಹೊರಬಿದ್ದ ಕೂಡಲೇ ಸಿಬಿಐ ನಿಂದ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಲಾಗಿದೆ. ಆ ನಂತರ ಪ್ರಧಾನಿಗಳ ಕಚೇರಿಯ ಮೇಲುಸ್ತುವಾರಿಯಲ್ಲೇ ಅತ್ಯಂತ ಕಟ್ಟುನಿಟ್ಟಾಗಿ ಮರು ಪರೀಕ್ಷೆ ನಡೆಸಿ ಫಲಿತಾಂಶವನ್ನು ಸಹ ನೀಡಲಾಗಿದೆ. ಇದು ದೇಶದ ವಿದ್ಯಾರ್ಥಿಗಳ ಕುರಿತು ಪ್ರಧಾನಿಗಳಿಗಿರುವ ಕಾಳಜಿಯಾಗಿದೆ. ಆದರೆ ವಿದ್ಯಾರ್ಥಿಗಳ ಹೆಸರಲ್ಲಿ ವಿರೋಧ ಪಕ್ಷಗಳು, ಎಡಪಕ್ಷಗಳು ರಾಜಕೀಯ ಲಾಭ ಪಡೆಯಲು ಮುಂದಾಗಿರುವುದು ಖಂಡನೀಯ ಎಂದರು.

ಮಾಧ್ಯಮದ ಮಹಿಳೆಯರ ಮೇಲೆ ದೌರ್ಜನ್ಯ, ಪೊಲೀಸರ ಮೇಲೆ ಹಲ್ಲೆ, ಹಿಂದೂ ಧರ್ಮದ ವಿರುದ್ಧ ಹೇಳಿಕೆ, ದೇಶ ವಿರೋಧಿ ಘೋಷಣೆ, ಅಂತಿಮವಾಗಿ ನಡೆದ ದೆಹಲಿ ಗಲಭೆಯ ಹಿಂದೆ ಬಹುದೊಡ್ಡ ವ್ಯವಸ್ಥಿತ ಪಿತೂರಿ ಅಡಗಿರುವುದನ್ನು ವಿದ್ಯಾರ್ಥಿ ಮುಖಂಡರುಗಳು ಈಗ ಅರ್ಥ ಮಾಡಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಯುವಜನರ ಹಿತರಕ್ಷಣೆಗೆ ಪ್ರಮುಖ ಆದ್ಯತೆ ನೀಡಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಸಮಯೋಚಿತ ನಿರ್ಧಾರವನ್ನು ಇಡೀ ದೇಶ ಸ್ವಾಗತಿಸುತ್ತಿರುವುದು, ಯುವ ಜನತೆ ಮೋದಿಯವರ ಮೇಲೆ ಹೊಂದಿರುವ ವಿಶ್ವಾಸಕ್ಕೆ ಸಾಕ್ಷಿ ಎಂದರು.


