ಆ.21ರಂದು ಮಂಗಳೂರಿನಲ್ಲಿ ಮೆಗಾ ಎಂಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್ ಸಮಾವೇಶ

ಮಂಗಳೂರು: ಪ್ರೊಡಕ್ಟಿವಿಟಿ ಕೌನ್ಸಿಲ್ ಹಾಗೂ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ವತಿಯಿಂದ ಆಗಸ್ಟ್ 21ರಂದು ಮಂಗಳೂರಿನ ಓಲ್ಡ್ ಪೋರ್ಟ್ ರಸ್ತೆಯ ತಾಜ್ ವಿವಾಂತ ಹೋಟೆಲ್ ಎದುರಿನ ರೆಡ್ ಕ್ರಾಸ್ ಪ್ರೇರಣಾ ಸಭಾಂಗಣದಲ್ಲಿ ಒಂದು ದಿನದ ಮೆಗಾ ಎಂಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್ ಸಮಾವೇಶ ಆಯೋಜಿಸಲಾಗಿದೆ ಎಂದು ನಿರ್ದೇಶಕ ಎಸ್.ಎಸ್. ನಾಯಕ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಕರ್ನಾಟಕದ ಉದ್ಯಮಿಗಳು ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದ್ದು, 400ಕ್ಕೂ ಹೆಚ್ಚು ಉದ್ಯಮಿಗಳು ಹಾಗೂ ಸ್ಟಾರ್ಟ್‌ಅಪ್‌ಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ತಂತ್ರಜ್ಞಾನ, ವ್ಯಾಪಾರ, ಇ-ಕಾಮರ್ಸ್, ಪ್ರವಾಸೋದ್ಯಮ, ಉತ್ಪಾದನೆ, ಸೇವೆ ಹಾಗೂ ಆರೋಗ್ಯ ಕ್ಷೇತ್ರಗಳ MSME ಮತ್ತು ನವೋದ್ಯಮಗಳಿಗೆ ಉತ್ತೇಜನ ನೀಡಲು ಉದ್ಯಮಿಗಳು, ಹೂಡಿಕೆದಾರರು, ಕೈಗಾರಿಕಾ ಮುಖಂಡರು, ನೀತಿ ನಿರೂಪಕರು ಹಾಗೂ ಪರಿಸರ ವ್ಯವಸ್ಥೆಯ ಪಾಲುದಾರರನ್ನು ಒಂದೇ ವೇದಿಕೆಗೆ ತರುವ ಉದ್ದೇಶ ಸಮಾವೇಶದ್ದಾಗಿದೆ.

MRPL ಮುಖ್ಯ ಪ್ರಾಯೋಜಕತ್ವ ವಹಿಸಿದ್ದು, SKF ಎಲಿಕ್ಸರ್, ರೈನ್‌ಲ್ಯಾಂಡ್ ಇಸುಜು, ಕೆನರಾ ರೋಬೆಕೊ ಮ್ಯೂಚುವಲ್ ಫಂಡ್, ಕ್ಯಾಂಪ್ರೊ ಹಾಗೂ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗಳು ಪೋಷಕ ಪ್ರಾಯೋಜಕರಾಗಿವೆ.

ಬೆಳಗ್ಗೆ 9.15ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉಡುಪಿ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. MSME ಮತ್ತು ಸ್ಟಾರ್ಟ್‌ಅಪ್‌ಗಳು, CIBIL ಸ್ಕೋರ್, ಸರ್ಕಾರಿ ಸಬ್ಸಿಡಿ, ಬ್ಯಾಂಕ್ ಸಾಲ ಸೌಲಭ್ಯ, ಮೀನುಗಾರಿಕೆ, ಕೃಷಿ, ಹೈನುಗಾರಿಕೆ, ಪಶುಸಂಗೋಪನೆ ಹಾಗೂ ಆಹಾರ ಸಂಸ್ಕರಣೆ ಕುರಿತು ತಜ್ಞರಿಂದ ವಿಶೇಷ ಅಧಿವೇಶನಗಳು ನಡೆಯಲಿವೆ.

ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಸಮ್ಮುಖದಲ್ಲಿ ಸಾಧಕ MSME ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಡಾ. ಪಿ.ಜಿ. ಮಹೇಶ್, ರೊ. ರವೀಂದ್ರ ಬಿ.ಎನ್., ರೊ. ಜಾಕ್ಸನ್ ಸಲ್ಡಾನ, ರೊ. ಡ್ಯಾರಿಲ್ ಡಿಸೋಜ, ಡಾ. ದೇವದಾಸ್ ಹಾಗೂ ಸತೀಶ್ ಮಾಬೆನ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!