ಮಂಜೇಶ್ವರ : ಕೊಟ್ಟಂಗುಳಿಯಲ್ಲಿ ಕೃಷಿಕರೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಟ್ಟಂಗುಳಿಯ ಅಜಿತ್ ಕುಮಾರ್ (43) ಸಾವನ್ನಪ್ಪಿದ ದುರ್ದೈವಿ.
ಶನಿವಾರ ಬೆಳಿಗ್ಗೆ ಅಜಿತ್ ನಾಪತ್ತೆಯಾಗಿದ್ದರಿಂದ ಕುಟುಂಬಸ್ಥರು ಹುಡುಕಾಟ ನಡೆಸಿದಾಗ, ಮನೆ ಸಮೀಪದ ಅಡಿಕೆ ತೋಟದ ಕೆರೆಯಲ್ಲಿ ಶವ ಪತ್ತೆಯಾಗಿದೆ. ಕೆರೆಗೆ ಹಾರುವ ಮುನ್ನ ಅವರು ಕೈಯ ನರ ಕತ್ತರಿಸಿಕೊಂಡಿರುವ ಸಾಧ್ಯತೆಯೂ ಇದೆ ಎಂದು ಶಂಕಿಸಲಾಗಿದೆ.
ಮಡಿಕೇರಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಅಜಿತ್, ವ್ಯಾಪಾರದಲ್ಲಿ ಉಂಟಾದ ಭಾರಿ ನಷ್ಟದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಬಳಿಕ ಊರಿಗೆ ಮರಳಿ ಕೃಷಿ ಮಾಡುತ್ತಿದ್ದರಾದರೂ, ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಆದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.