ಕಾಸರಗೋಡು: ಆಪರೇಷನ್ ತೂಫಾನ್ ಕಾರ್ಯಾಚರಣೆಯ ಭಾಗವಾಗಿ ಚಂದೇರ ಪೊಲೀಸರು ತೃಕ್ಕರಿಪ್ಪೂರಿನಲ್ಲಿ ನಡೆಸಿದ ದಾಳಿಯಲ್ಲಿ 1.20 ಗ್ರಾಂ ಎಂಡಿಎಂಎ (MDMA) ಸಹಿತ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಬಂಧಿತರು ಮಡಕ್ಕಾಲ್ ನಿವಾಸಿ ಎಂ.ಕೆ. ಮುನೀರ್ (39) ಮತ್ತು ಪಯ್ಯನ್ನೂರು ಕವ್ವಾಯಿ ನಿವಾಸಿ ಮೊಹಮ್ಮದ್ ಸಾಜಿದ್ (35) ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಸುಮಾರು 10 ಗಂಟೆಗೆ ಎಸ್ಐ ಎಂ. ಅಜ್ಮಲ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುವ ವೇಳೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದರು. ತೃಕ್ಕರಿಪ್ಪೂರು ಶಾಬಾ ಶೆಟ್ಟಿ ರಸ್ತೆ ಜಂಕ್ಷನ್ನಲ್ಲಿ ಬುಲೆಟ್ ಬೈಕ್ನಲ್ಲಿ ಸಂಚರಿಸುತ್ತಿದ್ದ ವೇಳೆ ಪೊಲೀಸರು ಕಂಡ ತಕ್ಷಣ ಅವರು ಹಿಂದಿರುಗಿ ಪರಾರಿಯಾಗಲು ಯತ್ನಿಸಿದರು. ಪೊಲೀಸರು ಬೆನ್ನಟ್ಟಿಸಿ ಇಬ್ಬರನ್ನೂ ವಶಕ್ಕೆ ಪಡೆದರು.
ಬಳಿಕ ನಡೆಸಿದ ದೇಹ ತಪಾಸಣೆಯಲ್ಲಿ ಮುನೀರ್ ಅವರ ಪ್ಯಾಂಟ್ ಜೇಬಿನಿಂದ 1.20 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಯಿತು. ಜೊತೆಗೆ ₹1,300 ನಗದು ಕೂಡ ವಶಕ್ಕೆ ಪಡೆಯಲಾಗಿದೆ.

ವಶಪಡಿಸಿಕೊಂಡ ಮಾದಕ ವಸ್ತುವನ್ನು ಸ್ವಂತ ಬಳಕೆ ಹಾಗೂ ಮಾರಾಟಕ್ಕಾಗಿ ತಂದಿದ್ದೇವೆ ಎಂದು ಆರೋಪಿಗಳು ಪೊಲೀಸರ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ.
ಬಂಧಿತ ಮುನೀರ್ ಅವರಿಗೆ ತಳಿಪ್ಪರಂಬಿನಲ್ಲಿ ದಾಖಲಾಗಿರುವ ಎಂಡಿಎಂಎ ಪ್ರಕರಣದೊಂದಿಗೂ ಸಂಬಂಧವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಪ್ರಕರಣದಲ್ಲಿಯೂ ಆರೋಪಿಗಳು ಬಳಸಿದ್ದ ವಾಹನ ಮುನೀರ್ ಅವರದ್ದೇ ಆಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಜಿಲ್ಲೆಯಲ್ಲಿ ವ್ಯಾಪಕವಾಗಿ ಮಾದಕವಸ್ತು ಮಾರಾಟ ನಡೆಸುತ್ತಿರುವ ಜಾಲದ ಪ್ರಮುಖ ವ್ಯಕ್ತಿಗಳಲ್ಲಿ ಮುನೀರ್ ಒಬ್ಬರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿಗಳಾದ *ಪ್ರಭೇಶ್ ಕುಮಾರ್, **ರಂಜಿತ್ ಮೂತ್ತೇಡತ್, *ಸುನಿಲ್ ಕುಮಾರ್ ಹಾಗೂ ನರೇಂದ್ರನ್ ಸಹ ಭಾಗವಹಿಸಿದ್ದರು


